ತಿರುವನಂತಪುರ: ಮದ್ಯ ಮಾರಾಟದ ಮೂಲಕ ಬೊಕ್ಕಸಕ್ಕೆ ಆದಾಯ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಡ್ರೈ ಡೇ ಹಿಂಪಡೆಯಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಮುಖ್ಯ ಕಾರ್ಯದರ್ಶಿ ವಿ.ವೇಣು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡ್ರೈ ಡೇ ಹಿಂಪಡೆಯಲು ಚಿಂತನೆ ನಡೆಸುವಂತೆ ಸೂಚಿಸಲಾಯಿತು. ಪ್ರವಾಸೋದ್ಯಮ ಕಾರ್ಯದರ್ಶಿಗೆ ವಿವರಗಳನ್ನು ಸಿದ್ಧಪಡಿಸಲು ವಹಿಸಲಾಗಿದೆ. ಆದಾಯ ಹೆಚ್ಚಿಸುವ ಭಾಗವಾಗಿ ಪಾನೀಯ ಮಳಿಗೆಗಳನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಡ್ರೈ ಡೇ ಹಿಂಪಡೆಯಬೇಕು ಎಂಬುದು ಬಾರ್ ಮಾಲೀಕರ ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಡ್ರೈ ಡೇ ಅಳವಡಿಕೆಯ ಉದ್ದೇಶವನ್ನೇ ಪ್ರಶ್ನಿಸುವುದರಿಂದ ಸರ್ಕಾರಗಳು ಅದನ್ನು ಒಪ್ಪಲಿಲ್ಲ. ಕಳೆದ ಮಾರ್ಚ್ 1ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡ್ರೈಡೇ ಹಿಂಪಡೆಯುವ ಕುರಿತು ಚರ್ಚೆ ನಡೆದಿತ್ತು. ಮಾ.3ರಂದು ಸಚಿವಾಲಯದ ದಕ್ಷಿಣ ಸಮ್ಮೇಳನ ಸಭಾಂಗಣದಲ್ಲಿ ನಡೆದ ಇಲಾಖಾ ಕಾರ್ಯದರ್ಶಿಗಳ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ ಪ್ರತಿ ತಿಂಗಳ ಮೊದಲ ದಿನ ಡ್ರೈ ಡೇ ಜಾರಿಯಲ್ಲಿದೆ. ಇದರ ಭಾಗವಾಗಿ ರಾಜ್ಯದಲ್ಲಿ ವರ್ಷದಲ್ಲಿ 12 ದಿನ ಮದ್ಯ ಮಾರಾಟ ನಡೆಯುತ್ತಿಲ್ಲ. ಈ ಮೂಲಕ ಕೇರಳ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.