ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿ ಹಗರಣದ ಪ್ರಮುಖ ಆರೋಪಿಯನ್ನು ರಕ್ಷಿಸಲು ಸಿಪಿಎಂ ಎಲ್ಲ ರೀತಿಯ ಸಹಾಯ ನೀಡುತ್ತಿರುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ ಶ್ರೀಕಾಂತ್ ತಿಳಿಸಿದ್ದಾರೆ. ಬಿಜೆಪಿ ಬೆಳ್ಳೂರು ಪಂಚಾಯತ್ ಸಮಿತಿ ನೇತೃತ್ವದಲ್ಲಿ ಸೊಸ್ಯಟಿಯ ಕಿನ್ನಿಂಗಾರ್ ಶಾಖೆ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಸೊಸೈಟಿ ಕಾರ್ಯದರ್ಶಿ ಹಾಗೂ ಸಿಪಿಎಂ ಮುಖಂಡ ರತೀಶ್ನನ್ನು ಸಿಪಿಎಂನ ಆದೇಶದನ್ವಯ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ವಂಚನೆಯ ಮೊತ್ತದ ಒಂದು ಭಾಗವನ್ನು ಸಿಪಿಎಂ ನಾಯಕರೊಬ್ಬರು ನಿಯಂತ್ರಿಸುತ್ತಿರುವ ಸಂಘವೊಂದರಲ್ಲಿ ಠೇವಣಿಯಿರಿಸಲಾಗಿದೆ. ಇನ್ನೊಂದು ಭಾಗವನ್ನು ಸಿಪಿಎಂ ನಾಯಕರು ಮತ್ತು ಪಕ್ಷಕ್ಕಾಗಿ ಹಂಚಿಕೊಳ್ಳಲಾಗಿದೆ.
ಸಿಪಿಎಂ ಮುಖಂಡರ ವಂಚನಾಜಾಲದಲ್ಲಿ ಮುಸ್ಲಿಂ ಲೀಗ್ ಪಂಚಾಯಿತಿ ಜನಪ್ರತಿನಿಧಿಯೊಬ್ಬನ ಕೈವಾಡವಿರುವ ಬಗ್ಗೆ ಮುಸ್ಲಿಂ ಲೀಗ್ ಮೌನವಹಿಸಿರುವುದು, ವಂಚನೆಯಲ್ಲಿ ಎರಡೂ ಪಕ್ಷಗಳು ಶಾಮೀಲಾಗಿರುವುದು ಸಾಬೀತಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರವಾಗಿ ಲಭಿಸಿದ್ದ ಮೊತ್ತವನ್ನೂ ಸೊಸೈಟಿಯಲ್ಲೂ ಹೂಡಿಕೆ ಮಾಡಲಾಗಿದ್ದು, ಎಂಡೋಸಲ್ಫಾನ್ ದುಚ್ಪರಿಣಾಮಪೀಡಿತರಿಗೂ ಸಿಪಿಎಂ ವಂಚನೆಯೆಸಗಿದೆ. ಭಾರೀ ಮೊತ್ತದ ಹಗರಣದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳನ್ನೂ ತಕ್ಷಣ ಬಂಧಿಸಬೇಕು ಎಂದು ಶ್ರೀಕಾಂತ್ ಆಗ್ರಹಿಸಿದರು.
ಬಿಜೆಪಿ ಬೆಳ್ಳೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಜಯಾನಂದ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ. ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಎಂ, ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಶ್ರೀಧರ, ಉಪಾಧ್ಯಕ್ಷೆ ಗೀತಾ. ಕೆ., ಭಾರತೀಯ ಜನತಾ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಥಾಮ್ಸನ್ ಜೋಸ್ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ ಸ್ವಾಗತಿಸಿದರು. ಓಬಿಸಿ ಮೋರ್ಚಾ ಪಂಚಾಯತ್ ಅಧ್ಯಕ್ಷ ರಮೇಶ್ ಬೆಳ್ಳೂರು ವಂದಿಸಿದರು.
ಸೊಸ್ಯಟಿಯ ಕಿನ್ನಿಂಗಾರ್ ಶಾಖೆ ಎದುರು ನಡೆದ ಧರಣಯನ್ನು ಕೆ.ಶ್ರೀಕಾಂತ್Â ಉದ್ಘಾಟಿಸಿ ಮಾತನಾಡಿದರು.