ಕಾಸರಗೋಡು: ಬೇಸಿಗೆ ಮಳೆ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ಬುಡಮೇಲುಗೊಳಿಸುತ್ತಿದೆ. ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಮೊದಲ ರೀಚ್ನಲ್ಲಿ ನಡೆಯುತ್ತಿರುವ ಹೆದ್ದಾರಿ ಷಟ್ಪಥ ಕಾಮಗಾರಿ ಆರಂಭದ ಮಳೆಗೇ ಕೆಸರುಮಯವಾಗಿದೆ. ಹೆದ್ದಾರಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಸುರಿದಿರುವುದರಿಂದ ಕೆಲವೆಡೆ ಮಳೆನೀರು ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.
ಮಳೆನೀರು ಸಂಚಾರಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಳ್ಳದಿರುವುದು ಹಾಗೂ ಮಳೆಗಾಲಪೂರ್ವ ಶುಚೀಕರಣದ ಬಗ್ಗೆ ಮುಂಜಾಗ್ರತೆ ವಹಿಸದಿರುವುದರಿಂದ ಕಾಮಗಾರಿ ಸಂಪೂರ್ಣ ಅಯೋಮಯವಾಗಲು ಕಾರಣವಾಗುತ್ತಿದೆ. ಹೊಸಂಗಡಿ, ಉಪ್ಪಳ, ಬಂದ್ಯೋಡು ಪ್ರದೇಶದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ನೀರು ಸರ್ವೀಸ್ ರಸ್ತೆಯಲ್ಲೇ ಹರಿಯುತ್ತಿದೆ. ಮಣ್ಣು ಮಿಶ್ರಿತ ಮಳೆನೀರಿನಿಂದಾಗಿ ಸರ್ವೀಸ್ ರಸ್ತೆ ಕೆಸರುಗದ್ದೆಯಂತಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಯಿಂದ ದುಸ್ಥಿತಿ ಅನುಭವಿಸುತ್ತಿದ್ದರೆ, ಇತರ ಗ್ರಾಮೀಣ ಪ್ರದೇಶದ ರಸ್ತೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಗಾಲಪೂರ್ವ ಶುಚೀಕರಣ ನಡೆಸದಿರುವುದರಿಂದ ಚರಂಡಿಗಳೆಲ್ಲವೂ ಬಂದ್ ಆಗಿದ್ದು, ನೀರು ರಸ್ತೆ ಮೇಲಿಂದ ಹರಿಯುವಂತಾಗಿದೆ.
ಇತ್ತೀಚೆಗಷ್ಟೆ ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ತಿಗೊಂಡಿರುವ ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆ ಬದಿಯಡ್ಕ ಪೇಟೆಯಲ್ಲಿ ಕೆಲವೆಡೆ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರಸ್ತೆಮೇಲಿಂದ ಹರಿಯುವ ನೀರು, ಒಳಚರಂಡಿಗಿಳಿಯದೆ ರಸ್ತೆಯಲ್ಲಿ ದಾಸ್ತಾನುಗೊಂಡು, ಹಳ್ಳದ ಸ್ಥಿತಿ ನಿರ್ಮಾಣವಾಗುತ್ತಿದೆ. ಸುಸಜ್ಜಿತ ಚರಂಡಿ ವ್ಯವಸ್ಥೆಯಿದ್ದರೂ, ರಸ್ತೆ ಮೇಲೆ ಬೀಳುವ ಮಳೆನೀರು ಹರಿದು ಚರಂಡಿ ಸೇರಲು ಸಮರ್ಪಕ ವ್ಯವಸ್ಥೆಯಿಲ್ಲದಿರುವುದು ರಸ್ತೆಯಲ್ಲೇ ಮಳೆನೀರು ದಾಸ್ತಾನಿಗೆ ಕಾರಣವಾಗುತ್ತಿದೆ. ಮಳೆಗಾಲಪೂರ್ವ ಶುಚೀಕರಣ ಕಾರ್ಯದ ಬಗ್ಗೆ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ನಿರ್ಲಕ್ಷ್ಯ ಧೋರಣೆ ತಳೆದಿರುವುದರಿಂದ ರಸ್ತೆಗಳಿಗೆ ಹಾನಿಯುಂಟಾಗುವ ಸಾಧ್ಯತೆಯಿದೆ. ಜತೆಗೆ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ದಾಸ್ತಾನುಗೊಮಡು ಸೊಳ್ಳೆ ಉತ್ಪತ್ತಿಗೂ ಕಾರಣವಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರದೆ, ಸಮರ್ಪಕವಾಗಿ ನೀರು ಹರಿದುಹೋಗಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮೇಲ್ಸೇತುವೆ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ದಾಸ್ತಾನುಗೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ನೀರು ಹರಿಯುವ ನಾಲೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಮಳೆಗಾಲಪೂರ್ವ ಶುಚೀಕರಣ ಕಾರ್ಯವನ್ನು ಕಾಲವಿಳಂಬವಿಲ್ಲದೆ ನಡೆಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಕೆ. ಇನ್ಬಾಶೇಖರ್,
ಜಿಲ್ಲಾಧಿಕಾರಿ
ಕಾಸರಗೋಡು