ಬದಿಯಡ್ಕ: ಸಂಪತ್ತು ಸದ್ವಿನಿಯೋಗವಾದಾಗ ಮಾತ್ರ ಅದಕ್ಕೊಂದು ಬೆಲೆಬರುತ್ತದೆ. ಯುವಕರನ್ನು ದೇವಾಲಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದಾಗ ಅದು ಮುಂದಿನ ತಲೆಮಾರಿಗೆ ಬಲುದೊಡ್ಡ ಕೊಡುಗೆಯಾಗಬಲ್ಲದು. ದೇವಾಲಯಗಳು ಅಭಿವೃದ್ಧಿಯಾದಂತೆ ಅದನ್ನು ಸುಸ್ಥಿತಿಯಲ್ಲಿಡುವ ಮಹತ್ತರವಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿ ಮತ್ತು ಸೇವಾಸಮಿತಿಯ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಬುಧವಾರ ಜರಗಿದ ಶತರುದ್ರಾಭಿಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬಲಿವಾಡುಕೂಟ, ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಸಮಾರಂಭ ಹಾಗೂ ಜೀರ್ಣೋದ್ಧಾರ ನಿಧಿ ಕೂಪನ್ ಡ್ರಾ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಉದ್ಯಮಿ ಮಧುಕರ ರೈ ಕೊರೆಕ್ಕಾನ ಅವರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಕುಂಬಳೆ ಸೀಮೆಯ ಅಭಿವೃದ್ಧಿಗೆ ಪೂರಕವಾಗಿ ಧಾರ್ಮಿಕ ಕ್ಷೇತ್ರಗಳು ಪುನರುದ್ಧಾರಗೊಳ್ಳುತ್ತಿದೆ. ಕ್ಷೇತ್ರಗಳ ಜೀರ್ಣೋದ್ಧಾರಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದರೆ ಯೋಗಭಾಗ್ಯಗಳಿರಬೇಕು ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿ, ಸಮಾಜದಲ್ಲಿ ಐಕ್ಯತೆಯನ್ನು ಸೃಷ್ಟಿಸುವ ಕಾರ್ಯ ನಡೆಯಬೇಕು. ದೇವರ ಮೇಲೆ ಹಾಗೂ ಪರಿಸರದ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟು ಪೂಜಿಸಬೇಕು. ಇಂದು ನಾವು ತಿನ್ನುವ ಆಹಾರ, ಗಾಳಿ, ನೀರು ಅಶುದ್ಧತೆಯಲ್ಲಿದೆ. ಯೋಗ ಧ್ಯಾನ, ಜಪ ತಪಗಳಿಂದ ಮುಂದುವರಿಯಬೇಕು. ದೇವಸ್ಥಾನದ ಒಳ ಆವರಣದಲ್ಲಿ ಅಶುದ್ಧಿಯಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಮಧುಸೂದನ ಆಯರ್ ಮಂಗಳೂರು, ರಾಷ್ಟ್ರಪ್ರಶಸ್ತಿವಿಜೇತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ, ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಉದ್ಯಮಿ ಶಿವಶಂಕರ ನೆಕ್ರಾಜೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ನ್ಯಾಯವಾದಿ ಬಿ.ಸುಬ್ಬಯ್ಯ ರೈ, ಉದ್ಯಮಿ ಬಿಂದು ಜಯದಾಸ್, ಶ್ರೀ ಉದನೇಶ್ವರ ಸೇವಾಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ಶಾಖೆಯ ಪ್ರಬಂಧಕ ನಿತೀಶ್ ಶೆಣೈ ಬದಿಯಡ್ಕ, ಚಂದ್ರಹಾಸ ರೈ ಪೆರಡಾಲಗುತ್ತು, ನಿತ್ಯಾನಂದ ಶೆಣೈ ಬದಿಯಡ್ಕ, ರವಿಕುಮಾರ ರೈ, ತಿರುಪತಿಕುಮಾರ ಭಟ್,ಪದ್ಮನಾಭ ಶೆಟ್ಟಿ ವಳಮಲೆ, ಸೂರ್ಯನಾರಾಯಣ ಬಿ., ಕೃಷ್ಣ ಬದಿಯಡ್ಕ, ಸೀತಾರಾಮ ನವಕಾನ, ಎಂ.ಮದನ, ನಿವೃತ್ತ ಪ್ರಾಂಶುಪಾಲ ಪ್ರೊ ಎ.ಶ್ರೀನಾಥ್ ಉಪಸ್ಥಿತರಿದ್ದರು. ಶ್ರೀ ಉದನೇಶ್ವರ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀದೇವರಿಗೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ನಿಧಿಕೂಪನ್ ಡ್ರಾ ಮಾಡಲಾಯಿತು. ದಾನಿಗಳು ಜೀರ್ಣೋದ್ಧಾರ ಕಾರ್ಯಗಳಿಗೆ ದೇಣಿಗೆಯನ್ನು ಸಮರ್ಪಣೆ ಮಾಡಿದರು. ಯುವಸಮಿತಿ ಅಧ್ಯಕ್ಷ ಡಾ. ಶ್ರೀಶಕುಮಾರ್ ಪಂಜಿತ್ತಡ್ಕ ಹಾಗೂ ಉದಯಶಂಕರ ಪಿ.ಎಸ್. ನಿರೂಪಿಸಿದರು.