ಕಾಸರಗೋಡು: ನಗರ ಠಾಣಾ ವ್ಯಾಪ್ತಿಯ ಮೊಗ್ರಾಲ್ಪುತ್ತೂರು ಹಾಗೂ ಮಂಜೇಶ್ವರದ ಮಚ್ಚಂಪಾಡಿಯಲ್ಲಿ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳವುಗೈದಿದ್ದಾರೆ.
ಮೊಗ್ರಾಲ್ಪುತ್ತೂರು ಪೇಟೆಯ ಮಸೀದಿ ಸನಿಹದ ಫೈಸಲ್ ಮಂಜಿಲ್ ನಿವಾಸಿ ಇಬ್ರಾಹಿಂ ಎಂಬವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು 45ಪವನು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಇಬ್ರಾಹಿಂ ಕುಟುಂಬ ಮನೆಗೆ ಬೀಗ ಹಾಕಿ ಬೆಂಗಳೂರು ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದೆ. ಮನೆಯೊಳಗಿನ ಕಪಾಟು ಒಡೆದು, ಅದರೊಳಗಿದ್ದ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಲಾಗಿದೆ. ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಬೆರಳಚ್ಚು, ಶ್ವಾನದಳದೊಂದಿಗೆ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಮಂಜೇಶ್ವರ ಮಚ್ಚಂಪಾಡಿ ಸಿ.ಎಂ ನಗರ ನಿವಾಸಿ, ವಇದೇಶದಲ್ಲಿ ಉದ್ಯೋಗಿಯಾಗಿರುವ ಇಬ್ರಾಹಿಂ ಖಲೀಲ್ ಎಂಬವರ ಎರಡಂತಸ್ತಿನ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಒಂಬತ್ತು ಪವನು ಚಿನ್ನ, ಒಂಬತ್ತು ಲಕ್ಷ ರೂ. ನಗದು ಹಾಗೂ 0ಂದು ರೆಡೋ ವಾಚು ಕಳವುಗೈದಿದ್ದಾರೆ. ಮನೆಯವರು ಮನೆಗೆ ಬೀಗ ಹಾಕಿ ವಿದೇಶಕ್ಕೆ ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದೆ. ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಇಬ್ಬರು ಹೆಲ್ಮೆಟ್ಧಾರಿಗಳು ಮನೆಯೊಳಗೆ ಕಳವುನಡೆಸುವ ದೃಶ್ಯ ಸೆರೆಯಾಘಿದೆ. ಇಬ್ರಾಹಿಂ ಖಲೀಲ್ ಅವರ ಸಹೋದರ ಅಬೂಬಕ್ಕರ್ ಸಇದ್ದೀಕ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಕಾರ್ಯ ಸಾಧ್ಯವಾಗದಿರುವ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.