ಕಾಸರಗೋಡು: ಕಾಞಂಗಾಡು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಚಿನ್ನಾಭರಣ ಕಿತ್ತು, ದೌರ್ಜನ್ಯವೆಸಗಿದ ಆರೋಪಿ ಪತ್ತೆಗಾಗಿ ಪೊಲೀಸರು ಕೊಡಗಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಕೊಡಗು ನಿವಾಸಿ, 33ರ ಹರೆಯದ ಯುವಕ ಕೃತ್ಯವೆಗಿರುವ ಬಗ್ಗೆ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ಕೊಡಗಿಗೆ ವಿಸ್ತರಿಸಲಾಗಿದೆ. ಘಟನೆ ನಡೆದಿರುವ ಪ್ರದೇಶ ಆರೋಪಿಗೆ ಹೆಚ್ಚು ಪರಿಚಿತವಾಗಿರುವುದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಮೇ 15ರಂದು ನಸುಕಿಗೆ ಘಟನೆ ನಡೆದಿತ್ತು. ನಿದ್ದೆಯಲ್ಲಿದ್ದ ಬಾಲಕಿಯನ್ನು ಬಗಲಲ್ಲಿ ಹಾಕಿ ಹೊರ ನಡೆದ ದುಷ್ಕರ್ಮಿ, ನಂತರ ಚಿನ್ನಾಭರಣ ಕಸಿದು, ಬಾಲಕಿ ಮೇಲೆ ದೌರ್ಜನ್ಯಕ್ಕೂ ಯತ್ನಿಸಿರುವುದಾಗಿ ಸಂಶಯಿಸಲಾಗಿದೆ. ಡಿವೈಎಸ್ಪಿಗಳಾದ ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ ಸುನಿಲ್ ನೇತೃತ್ವ ವಿಶೇಷ ತಂಡ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ.