ಕಾಸರಗೋಡು: ಏರುತ್ತಿರುವ ಬಿಸಿಲ ಬೇಗೆಯಿಂದ ಸಮುದ್ರದಲ್ಲಿ ಮತ್ಯ್ಸ ಸಂಪತ್ತೂ ಕರಗುತ್ತಿದೆ. ಸಮುದ್ರದ ನೀರು ಬಿಸಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗುತ್ತಿರುವ ಮಧ್ಯೆ ನಿಷೇಧಿತ ಬಲೆ ಹಾಗೂ ಬೆಳಕಿನ ವ್ಯವಸ್ಥೆಯೊಂದಿಗೆ ಇತರ ರಾಜ್ಯಗಳ ಮೀನುಗಾರರು ಭಾರಿ ಪ್ರಮಾಣದಲ್ಲಿ ಮೀನು ಲೂಟಿ ಮಾಡುತ್ತಿರುವುದು ಕಾಸರಗೋಡಿನ ಪರಂಪರಾಗತ ಮೀನುಗಾರಿಕೆಗೆ ಹೊಡೆತ ತಂದುಕೊಡುತ್ತಿದೆ.
ಮೀನುಗಾರಿಕೆಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿರುವ ಕಾಸರಗೋಡಿನ ಮೀನುಗಾರರು ಮೀನು ಲಭ್ಯತೆಯಲ್ಲಿ ಗಣನೀಯ ಕುಸಿತದಿಂದ ಕಂಗೆಟ್ಟಿದ್ದಾರೆ. ಇತರ ರಾಜ್ಯಗಳ ಮೀನುಗಾರರು ದೊಡ್ಡ ಬೋಟ್ಗಳಲ್ಲಿ ನಿಷೇಧಿತ ಬಲೆ ಹಾಗೂ ಪ್ರಖರ ಬೆಳಕಿನ ಮೂಲಕ ಮತ್ಸ್ಯ ಸಂಪತ್ತನ್ನು ವ್ಯಾಪಕವಾಗಿ ಕೊಳ್ಳೆ ಹೊಡೆಯುತ್ತಿರುವುದರಿಂದ ಪಾರಂಪರಿಕ ಮೀನುಗಾರರಿಗೆ ಮೀನು ಲಭ್ಯವಾಗದ ಸ್ಥಿತಿಯಿದೆ. ಕಳೆದ ಮೂರು ತಿಂಗಳ ಕಾಲಾವಧಿಯಲ್ಲಿ ಹತ್ತಕ್ಕೂ ಹೆಚ್ಚು ಇಂತಹ ಬೋಟುಗಳನ್ನು ಮೀನುಗಾರಿಕಾ ಇಲಾಖೆ ಪತ್ತೆಹಚ್ಚಿ ಇವರಿಂದ ಲಕ್ಷಾಂತರ ರೂ. ದಂಡ ವಸೂಲಿ ನಡೆಸಿದ್ದರೂ, ಇನ್ನು ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಅದೆಷ್ಟೋ ದೋಣಿಗಳು ಇಲ್ಲಿನ ಸಮುದ್ರದಿಂದ ಮೀನು ಬೇಟೆಯಾಡುತ್ತಿದೆ. ಅನಧಿಕೃತ ಮೀನುಗಾರಿಕೆ ವಿರುದ್ಧ ಕಳೆದ ವರ್ಷ ನೀಲೇಶ್ವರದ ಮೀನುಗಾರರು ಸಂಪೂರ್ಣ ಧಕ್ಕೆ ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಮೀನಿನ ಕೊರತೆಯಿಂದ ಮೀನಿನ ಧಾರಣೆಯಲ್ಲೂ ಭಾರೀ ಏರಿಕೆಯುಂಟಾಗಿದೆ. ಮೀನು ಲಭ್ಯವಾಗದಿರುವುದರಿಂದ ಇತರ ರಾಜ್ಯಗಳಿಂದ ಮಂಜುಗಡ್ಡೆಯಲ್ಲಿರಿಸಿದ ಮೀನನ್ನು ತಂದು ಮಾರಾಟ ಮಾಡಲಾಗುತ್ತಿದೆ. ಇದು ಆರೋಗ್ಯಕ್ಕೂ ಹಾನಿಕಾರಕವಾಗುತ್ತಿದೆ. ಮೇ ತಿಂಗಳ ವರೆಗೆ ಮಾತ್ರ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶವಿದ್ದು, ಜೂನ್ ತಿಂಗಳಲ್ಲಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿರುವುದರಿಂದ ಮತ್ತೆ ಒಂದೆರಡು ತಿಂಗಳ ಕಾಲ ಮೀನುಗಾರರು ಬರಿಗೈಯಲ್ಲಿ ಕುಳಿತಿರಬೇಕಾಗುತ್ತದೆ. ಧಾರಾಳ ಮೀನು ಲಭ್ಯವಾಗಬೇಕಾದ ಸಮಯದಲ್ಲಿ ಕಾಸರಗೋಡಿನ ಮೀನುಕಾರ್ಮಿಕರು ಮೀನಿನ ಬರದಿಂದ ಕಂಗಾಲಾಗಿದ್ದಾರೆ. ಮೀನಿನ ಕೊರತೆಯಿಂದ ಕಾಸರಗೋಡು ಮೀನು ಮಾರುಕಟ್ಟೆಯೂ ಬಿಕೋ ಅನ್ನುತ್ತಿದೆ. ಧಾರಾಳವಾಗಿ ಲಭಿಸುತ್ತಿದ್ದ ಬಂಗುಡೆ, ಬೂತಾಯಿಗೂ ಬರ ಎದುರಾಗಿದೆ.
ಕಠಿಣ ಕಾನೂನು ಕ್ರಮವಿಲ್ಲ:
ಅನಧಿಕೃತವಾಗಿ ಮೀನುಗಾರಿಕೆ ನಡೆಸುತ್ತಿದ್ದ ಇತರ ರಾಜ್ಯಗಳ ಮೀನುಗಾರಿಕಾ ದೋಣಿಗಳನ್ನು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಕರಾವಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ದಂಡ ವಸೂಲಿ ಮಾಡುವುದರ ಜತೆಗೆ ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ(ಕೆಎಂಎಫಾರ್ಆರ್)ಕಾನೂನಿನನ್ವಯ ಬೋಟ್ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದರೂ, ಕಠಿಣ ಕಾನೂನು ಕ್ರಮಗಳಿಲ್ಲದಿರುವುದರಿಂದ ಅನಧಿಕೃತ ಮೀನುಗಾರಿಕೆ ನಿಯಂತ್ರಿಸಲಾಗುತ್ತಿಲ್ಲ.