ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಪುಲ್ಲೂರು ಬಳಿ ಮೇಲ್ಸೇತುವೆಗೆ ಅಳವಡಿಸಿದ್ದ ಭಾರೀ ಗಾತ್ರದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಈ ಪ್ರದೇಶದಲ್ಲಿ ಕಾಮಗಾರಿ ಅಸ್ತವ್ಯಸ್ತಗೊಂಡಿದೆ. ಈ ಪ್ರದೇಶದಲ್ಲಿ ಕಾರ್ಮಿಕರಿಲ್ಲದಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ದುರಂತ ತಪ್ಪಿದೆ. ಅನತಿ ದೂರದಲ್ಲಿ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಭಾರೀ ಶಬ್ದದೊಂದಿಗೆ ಏಕಾಏಕಿ ಸ್ಲ್ಯಾಬ್ ಕುಸಿದು ಬಿದ್ದಿದೆ.
ತಿಂಗಳ ಹಿಂದೆಯಷ್ಟೆ ಈ ಗಾರ್ಡರ್ ಸ್ಥಾಪಿಸಲಾಗಿದ್ದು, ಇದರ ಮೇಲಿಂದ ಡಾಂಬರೀಕರಣವನ್ನೂ ನಡೆಸಲಾಗಿತ್ತು. ಸ್ಲ್ಯಾಬ್ ಕುಸಿದು ಬೀಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಗರಿಕರು, ಘಟನೆಯ ಚಿತ್ರೀಕರಣ ನಡೆಸುವುದಕ್ಕೆ ಗುತ್ತಿಗೆದಾರರ ಸಂಸ್ಥೆಯವರು ತಡೆ ಒಡ್ಡಿದಾಗ, ವಾಗ್ವಾದಕ್ಕೂ ಕಾರಣವಾಗಿತ್ತು. ದುರಂತದ ಬಗ್ಗೆ ಹೊರಗಿನ ಏಜನ್ಸಿಯಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಷಟ್ಪಥ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಮೇಘಾ ಕನ್ಸ್ಟ್ರಕ್ಷನ್ ಅಧಿಕಾರಿಗಳು ತಿಳಿಸಿದ್ದಾರೆ.