ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡಿನ ಆಸುಪಾಸು ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಅಪಹರಿಸಿ, ಮೈಮೇಲಿದ್ದ ಚಿನ್ನಾಭರಣ ಕಸಿದು ದೌರ್ಜನ್ಯ ನಡೆಸಿದ್ದ ಪ್ರಕರಣದ ಆರೋಪಿ, ಕೊಡಗು ನಾಪೊಕ್ಲು ನಿವಾಸಿ ಸಲೀಂ ಎಂಬಾತನನ್ನು ಆಂಧ್ರಪ್ರದೇಶದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಆರೋಪಿ, ಮೊಬೈಲ್ ಬಳಕೆಯನ್ನೂ ನಿಯಂತ್ರಿಸಿದ್ದನು. ಕೊಡಗಿಗೆ ತೆರಳಿದರೆ, ತಾಯಿ ಮೊಬೈಲ್ ಹಾಗೂ ಕಾಞಂಗಾಡಿನಲ್ಲಿ ಪತ್ನಿಯ ಮೊಬೈಲ್ ಮಾತ್ರ ಬಳಸಿಕೊಳ್ಳುತ್ತಿದ್ದನು. ಪತ್ನಿಯೊಂದಿಗೆ ರಾತ್ರಿ ವೇಳೆ ಮೊಬೈಲ್ ಸಂಭಾಷಣೆ ನಡೆಸುವ ಮಧ್ಯೆ ಪೊಲೀಸರು ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದೆ. ಪೊಲೀಸರು ಆರೋಪಿಯನ್ನು ಕಾಸರಗೋಡಿಗೆ ಕರೆತರುತ್ತಿದ್ದಾರೆ.
ಮೇ 15ರಂದು ನಸುಕಿಗೆ, ಬಾಲಕಿಯ ಅಜ್ಜ ಹಾಲು ಕರೆಯಲು ಹೊರಗೆ ತೆರಳುತ್ತಿದ್ದಂತೆ, ಆರೋಪಿ ಮನೆಯೊಳಗೆ ನುಗ್ಗಿ, ನಿದ್ರಿಸುತ್ತಿದ್ದ ಬಾಲಕಿಯನ್ನು ಹೆಗಲಿಗೇರಿಸಿ ಸುಮಾರು 500ಮೀ. ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ, ಮೈಮೇಲಿನ ಚಿನ್ನಾಭರಣ ಕಸಿದು, ದೌರ್ಜನ್ಯವೆಸಗಿ ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾಗಿದ್ದನು. ಬಾಲಕಿ ಸನಿಹದ ಮನೆಗೆ ತೆರಳಿ ಕಾಲಿಂಗ್ ಬೆಲ್ ಅದುಮಿ ಮನೆಯವರನ್ನು ಎಬ್ಬಿಸಿ, ಘಟನೆ ವಿವರಿಸಿದ್ದ ಹಿನ್ನೆಲೆಯಲ್ಲಿ, ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ನಂತರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಿಟ್ಟಿನಲ್ಲಿ 165ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ, ಇವುಗಳಲ್ಲಿ ಲಭಿಸಿದ ಚಿತ್ರ ಕೇಂದ್ರೀಕರಿಸಿ ಪೊಲೀಸರು ತಯಾರಿಸಲಾದ ರೇಖಾ ಚಿತ್ರ ಬಿಡುಗಡೆಗೊಳಿಸಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ಸಎರೆಯಾದ ಚಿತ್ರದಲ್ಲಿ ಮುಖದ ಚಹರೆ ಗೊತ್ತಾಗದಿದ್ದರೂ, ಈತ ಧರಿಸಿದ್ದ ಬಟ್ಟೆ ಹಾಗೂ ಈತನ ನಡಿಗೆ ಆರೋಪಿಯ ಸುಳಿವು ಪತ್ತೆಹಚ್ಚಲು ಸಹಕಾರಿಯಾಗಿತ್ತು. ವಶಕ್ಕೆ ಪಡೆದುಕೊಂಡಿರುವ ಆರೋಪಿ ಹಾಗೂ ರೇಖಾ ಚಿತ್ರಕ್ಕೆ ಸಾಮ್ಯತೆಯಿರುವುದನ್ನೂ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಗಿತ್ತು.
ಸ್ಥಳ ಪರಿಚಯ ಹೊಂದಿದ್ದ:
ಕಳೆದ ಹದಿನಾಲ್ಕು ವರ್ಷಗಳಿಂದ ಕಾಞಂಗಾಡಿನಲ್ಲಿ ವಾಸಿಸುತ್ತಿರುವ ಸಲೀಂ, ಕರಾವಳಿ ಪ್ರದೇಶದ ಯುವತಿಯನ್ನು ವಿವಾಹಿತನಾಗಿ ಇಲ್ಲೇ ವಾಸ್ತವ್ಯ ಹೂಡಿದ್ದನು. ಬಾಲಕಿ ಮನೆ ಸನಿಹದಿಂದ ಆರೋಪಿ ವಿವಾಹಿತನಾಗಿದ್ದ ಹಿನ್ನೆಲೆಯಲ್ಲಿ ಬಾಲಕಿಯ ಚಲನವಲನದ ಬಗ್ಗೆ ಸಲೀಮ್ಗೆ ಸಮಗ್ರ ಮಾಹಿತಿ ಇತ್ತೆನ್ನಲಾಗಿದೆ. ಆರೋಪಿ ವಿರುದ್ಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಎರಡು ವರ್ಷದ ಹಿಂದೆ, ಈತನ ಸಂಬಂಧಿ ಬಾಲಕಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಕೇಸು ದಾಖಲಾಗಿದೆ. ಬಾಲಕಿಯನ್ನು ಸ್ಕೂಟರಲ್ಲಿ ಕರೆದೊಯ್ದು, ಆದೂರು ಅರಣ್ಯ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು. ಸುಳ್ಯ, ಕೊಡಗು ಠಾಣೆಗಳಲ್ಲಿ ಚಿನ್ನಾಭರಣ ಕಸಿದ ಪ್ರಕರಣಗಳಿಗೂ ಸಂಬಂಧಿಸಿ ಈತನ ವಿರುದ್ಧ ಕೇಸುಗಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇರಳ ಆಯ್ಕೆ:
ಕೇರಳದಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಚಿನ್ನಾಭರಣ ಕಳವು, ಕೊಲೆ ಸುಲಿಗೆ ಸೇರಿದಂತೆ ಬಹುತೇಕ ಪ್ರಕರಣಗಳಲ್ಲಿ ಇತರ ರಾಜ್ಯಗಳ ಆರೋಪಿಗಳೇ ಹೆಚ್ಚಾಗಿ ಶಾಮೀಲಾಗುತ್ತಿದ್ದು, ಇವರಿಗೆ ಸುರಕ್ಷಿತ ತಾಣವಾಗಿ ಬದಲಾಗಿದೆ. ಕೇರಳದಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗೆ ನೀಡುತ್ತಿರುವ ಪರಿಗಣನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿಯೂ ಆರೋಪ ಕೇಳಿಬರುತ್ತಿದೆ.