ಕಾಸರಗೋಡು: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಆಹಾರ ಸುರಕ್ಷತಾ ಕಚೇರಿಗಳಿಗೆ ರಾಜ್ಯ ವಿಜಿಲೆನ್ಸ್ ತಂಡ ಏಕ ಕಾಳದಲ್ಲಿ ದಾಳಿ ಆಯೋಜಿಸಿದ್ದು, ದಾಳಿಯಲ್ಲಿ ವ್ಯಾಪಕವಾಗಿ ಲೋಪ ನಡೆದಿರುವುದನ್ನು ಪತ್ತೆಹಚ್ಚಲಾಗಿದೆ. ಕಾಸರಗೋಡು, ನೀಲೇಶ್ವರ, ಸುಲ್ತಾನ್ಬತ್ತೇರಿ, ಮಂಜೇರಿ, ತಿರೂರ್, ಕೋಟ್ಟಕ್ಕಲ್, ಮಲಪ್ಪುರಂ ಕಚೇರಿಗಳಿಗೆ ನಡೆದ ದಾಳಿಯಲ್ಲಿ ಪರವಾನಗಿಯಿಲ್ಲದೆ ಹಾಗೂ ಪರವಾನಗಿ ನಿಗದಿತ ಕಾಲಾವಧಿ ಕಳೆದರೂ ಕಾರ್ಯಾಚರಿಸುತ್ತಿದ್ದ ಹೋಟೆಲ್ಗಳನ್ನು ಪತ್ತೆಹಚ್ಚಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾರ್ಷಿಕ ಭಾರೀ ಮೊತ್ತದ ಆಹಾರ ಉತ್ಪಾದನಾ ಸಂಸ್ಥೆಗಳಿಗೆ ನೀಡುವ ಪರವಾನಗಿ ಬದಲು ಕಿರು ವ್ಯಾಪಾರಿ ಸಂಸ್ಥೆ ಹೆಸರಲ್ಲಿ ಲೈಸನ್ಸ್ ನೀಡಿರುವುದನ್ನು ಪತ್ತೆಹಚ್ಚಲಾಗಿದೆ. ಈ ಕ್ರಮದಿಂದ ಸರ್ಕಾರಕ್ಕೆ ಸಂದಾಯವಾಗಬೇಕಾದ ಭಾರೀ ಮೊತ್ತದ ಆದಾಯದ ನಷ್ಟ ಉಂಟಾಗಿರುವುದನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ. ಆಹಾರ ಉತ್ಪಾದಕ ಸಂಸ್ಥೆಗಳಿಂದ ದಂಡ ವಸೂಲಿ ಮಾಡುವಲ್ಲೂ ವಿಳಂಬವುಂಟುಮಾಡಿ, ಅಂತಹ ಸಂಸ್ಥೆಗಳನ್ನು ಕಾನೂನು ಕ್ರಮಗಳಿಂದ ರಕ್ಷಿಸಲು ನಡೆಸಿರುವ ಯತ್ನವನ್ನೂ ದಾಳಿ ಸಂದರ್ಭ ಪತ್ತೆಹಚ್ಚಲಾಗಿದೆ.