ಬದಿಯಡ್ಕ: ಕೊಲ್ಲಂಗಾನ ಶ್ರೀನಿಲಯ ಸಮೀಪದ ' ಅನಂತಶ್ರೀ ' ಯಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮಶತವರ್ಷ ಉತ್ಸವವನ್ನು ಶನಿವಾರ ಆಚರಿಸಲಾಯಿತು. ಸಾಹಿತಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಅವರು ನಿರಂಜನರ ಬದುಕು-ಬರಹಗಳ ಕುರಿತು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾವಹಿಸಿದ ನಿರಂಜನರು ಕಾಸರಗೋಡಿನೊಂದಿಗೆ ನಿಕಟ ಸಂಪರ್ಕವಿರಿಸಿದ್ದರು. ಜೀವನೋಪಾಯಕ್ಕೆ ಪತ್ರಿಕೋದ್ಯಮವನ್ನು ಆಯ್ದುಕೊಂಡ ಅವರು ಪ್ರಬುಧ್ಧ ಅಂಕಣಕಾರರಾಗಿ ಗುರುತಿಸಿಕೊಂಡಿದ್ದರು. ಸಮಾಜಪರವಾದ ವೈಜ್ಞಾನಿಕ ಮನೋಧರ್ಮದ ಪ್ರಗತಿಶೀಲ ಲೇಖಕರಾಗಿ ಉತ್ಕøಷ್ಟ ಸಾಹಿತ್ಯಕೃತಿಗಳನ್ನು ನೀಡಿ ಚಿರಸ್ಮರಣೀಯರಾದವರು ಎಂದು ಬಾಲಕೃಷ್ಣ ಬೇರಿಕೆ ಹೇಳಿದರು.
ಕವಿ, ಪತ್ರಕರ್ತ ರಾಧಾಕೃಷ್ಣ.ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ನಿರಂಜನರ ಕ್ರಾಂತಿಕಾರಿ ಬರಹಗಳನ್ನು ಪ್ರಸ್ಥಾಪಿಸಿದ ಅವರು ಅವುಗಳು ಬೀರಿದ ಪ್ರಭಾವ ಮತ್ತು ಪರಿಣಾಮಗಳನ್ನು ವಿವರಿಸಿದರು. 'ಅನಂತಶ್ರೀ' ಸಂಸ್ಥಾಪಕ ಪ್ರೊ.ಎ.ಶ್ರೀನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಾಹಿತಿಗಳಾದ ಬಾಲ ಮಧುರಕಾನನ, ರವೀಂದ್ರನ್ ಪಾಡಿ, ರಾಘವನ್ ಬೆಳ್ಳಿಪ್ಪಾಡಿ, ಪ್ರೇಮಚಂದ್ರನ್ ಚೊಂಬಾಲ, ಸ್ನೇಹಲತಾ ದಿವಾಕರ್, ವನಜಾಕ್ಷಿ ಚೆಂಬ್ರಕಾನ, ಸುಂದರ ಬಾರಡ್ಕ, ಪ್ರಸನ್ನ ಕುಮಾರಿ ಮರ್ದಂಬೈಲು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಬಹುಭಾಷಾ ಕವಿಗೋಷ್ಠಿ ನಡೆಯಿತು.