ಕಾಸರಗೋಡು: ಹಸಿರು ಕೇರಳ ಮಿಷನ್ ಮತ್ತು ತಿರುವನಂತಪುರಂ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರ್ ನೇತೃತ್ವದಲ್ಲಿ ನೆಟ್ ಝೀರೋ ಕಾರ್ಬನ್ ಕೇರಳ ಯೋಜನೆಯ ಅಂಗವಾಗಿ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಇಂಧನ ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ. ನವಕೇರಳ ಕ್ರಿಯಾ ಯೋಜನೆ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆಯ್ಕೆಯಾದ ಪುತ್ತಿಗೆ, ದೇಲಂಪಾಡಿ, ಮುಳಿಯಾರ್, ಬೇಡಡ್ಕ, ಪುಲ್ಲೂರು ಪೆರಿಯ, ಮಡಿಕೈ, ಕಿನಾನೂರು ಕರಿಂತಳಂ, ಚೆರ್ವತ್ತುರು, ಪಿಲಿಕ್ಕೊಡ್, ತ್ರಿಕ್ಕರಿಪುರ, ವಲಿಯಪರಮಬ ಸೇರಿದಂತೆ 11ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದಲ್ಲಿ ಇಂಧನ ಲೆಕ್ಕ ಪರಿಶೋಧನೆ ಆರಂಭಿಸಲಾಗಿದೆ. ರಾಜ್ಯ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರ್ ಮತ್ತು ಡಬ್ಲ್ಯುಆರ್ಐ ನೇತೃತ್ವದಲ್ಲಿ ಅತುಲ್ ಎನರ್ಜಿ ಸಲ್ಯೂಷನ್ಸ್ ಎನರ್ಜಿ ಆಡಿಟ್ ತರಬೇತಿಯನ್ನು ನೀಡುತ್ತಿದೆ.
ಪಿಲಿಕೋಡು ಪಂಚಾಯಿತಿಯಲ್ಲಿ ಸಾರ್ವಜನಿಕ ಇಂಧನ ಲೆಕ್ಕ ಪರಿಶೋಧನೆಯನ್ನು ಪಂಚಾಯಿತಿ ಅಧ್ಯಕ್ಷ ಪಿ.ಪಿ.ಪ್ರಸನ್ನ ಉದ್ಘಾಟಿಸಿದರು. ಉಪಾಧ್ಯಕ್ಷ ಎ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಲೆ, ಪಂಚಾಯಿತಿ ಕಚೇರಿ ಮತ್ತು ಪಂಚಾಯಿತಿಯ ಅಂಗ ಸಂಸ್ಥೆಗಳಲ್ಲಿ ತಲಾ ಮೂವರಿಗೆ ತರಬೇತಿ ನೀಡಲಾಯಿತು. ಇಂಧನ ಬಳಕೆ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ಇಂಧನ ಭದ್ರತೆಗೆ ಕ್ರಮಕೈಗೊಳ್ಳಲಾಗುವುದು. ಯೋಜನೆಯ ಮುಂದಿನ ಹಂತದಲ್ಲಿ, ಇಂಧನ ಭದ್ರತಾ ಲೆಕ್ಕಪರಿಶೋಧನೆಯನ್ನು ಮನೆಗಳಲ್ಲಿಯೂ ನಡೆಸಲಾಗುವುದು. ನವಕೇರಳ ಕ್ರಿಯಾ ಯೋಜನೆ ಸಂಪನ್ಮೂಲ ವ್ಯಕ್ತಿಗಳಾದ ಪಿ.ವಿ.ದೇವರಾಜನ್, ಕೆ.ಕೆ.ರಾಘವನ್, ಕೆ. ಬಾಲಚಂದ್ರನ್ ಮತ್ತು ಪಿ.ಕೆ.ಲೋಹಿತಾಕ್ಷನ್ ಅವರು ಇಂಟರ್ನ್ ತರಬೇತುದಾರರು ಮತ್ತು ಸ್ವಯಂಸೇವಕರ ನೇತೃತ್ವದಲ್ಲಿ ನಡೆಯಲಿದೆ.