ಮುಳ್ಳೇರಿಯ: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ವಂಚನೆ ನಡೆಸಿರುವ ಚಿನ್ನದಲ್ಲಿ 21ಪವನು ಚಿನ್ನಾಭರಣವನ್ನು ತನಿಖಾ ತಂಡ ಪತ್ತೆಹಚ್ಚಿದೆ. ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಾಞಂಗಾಡು ನೆಲ್ಲಿಕ್ಕಾಡ್ ನಿವಾಸಿ ಅನಿಲ್ಕುಮಾರ್ನ ಸಂಬಂಧಿನೊಬ್ಬನ ಹೆಸರಲ್ಲಿ ಅಡವಿರಿಸಿದ ಚಿನ್ನ ಇದಾಗಿದೆ. ಪ್ರಕರಣದ ತನಿಖಾಧಿಕಾರಿ, ಡಿವೈಎಸ್ಪಿ ಶಿಬು ಪಾಪಚ್ಚನ್ ನೇತೃತ್ವದ ಪೊಲೀಸರ ತಮಡ ಚಿನ್ನ ಪತ್ತೆಹಚ್ಚಿದೆ. ಇದುವರೆಗೆ 1.6ಕಿ.ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ, ಸಹಕಾರಿ ಸಂಘ ಕಾರ್ಯದರ್ಶಿ, ಕರ್ಮಂತೋಡಿ ನಿವಾಸಿ ಕೆ. ರತೀಶ್ ಹಾಗೂ ಈತನ ಸಹಚರ ಕಣ್ಣೂರು ನಿವಾಸಿ ಜಬ್ಬಾರ್ ಅವರ ಪತ್ತೆ ಇನ್ನೂ ಸಾಧ್ಯವಾಗಿಲ್ಲ.
ಪ್ರಾಥಮಿಕ ಪರಿಶೋಧನೆಯಿಂದ 4,75,99,907 ರೂ. ಮೊತ್ತದ ವಂಚನೆ ಪತ್ತೆಹಚ್ಚಲಾಗಿದೆ. ಇದರಲ್ಲಿ ಚಿನ್ನಾಭರಣ ಪಡೆಯದೇ ಏಳು ಲಕ್ಷ ರೂ. ಸಾಲ ನೀಡಿರುವುದನ್ನೂ ಪತ್ತೆಹಚ್ಚಲಾಗಿತ್ತು. ಸಹಕಾರಿ ಇಲಾಖೆ ನಡೆಸಿದ ತಪಾಸಣೆಯಿಂದ ವಂಚನೆ ಬಯಲಿಗೆ ಬಂದಿದೆ.