ತಿರುವನಂತಪುರಂ: ಪ್ರತಿ ಶನಿವಾರ ಮತ್ತು ಭಾನುವಾರ ರಜೆ, ಜೊತೆಗೆ ವರ್ಷದಲ್ಲಿ ಎರಡು ತಿಂಗಳ ಬೇಸಿಗೆ ರಜೆ, ಮತ್ತು ಓಣಂ ಮತ್ತು ಕ್ರಿಸ್ಮಸ್ ರಜಾದಿನಗಳು.
ಇದು ರಾಜ್ಯದಲ್ಲಿ ಶಿಕ್ಷಕರ ಬಗ್ಗೆ ಜನಸಾಮಾನ್ಯರ ಮನಸ್ಸಲ್ಲಿರುವ ಕುತ್ಸಿತ ಮನೋಭಾವ. ಆದರಿದು ಸಂಪೂರ್ಣ ಸತ್ಯವಲ್ಲದಿದ್ದರೂ ಶಿಕ್ಷಕರಂತೆ ರಜೆ ಪಡೆಯುವ ಸರ್ಕಾರಿ ಸಂಬಳ ಪಡೆಯುವ ನೌಕರರು ಬೇರೆ ಯಾರೂ ಇಲ್ಲ.
ಮಕ್ಕಳಿಗೆ ಶಾಲೆಯಲ್ಲಿ ಲಭಿಸುವ ರಜೆಯನ್ನು ಶಿಕ್ಷಕರಿಗೆ ನೀಡದಿದ್ದರೂ, ಬಿಡುವಿನ ವೇಳೆಯಲ್ಲಿ ಅವರು ಬೇರೆಯವರಿಗಿಂತ ಬಹಳ ಮುಂದಿರುತ್ತಾರೆ. ಆದರೆ, ರಜಾ ದಿನಗಳನ್ನು ಸ್ವಲ್ಪ ಕಡಮೆ ಮಾಡಿದರೆ ಅಥವಾ ವಿದ್ಯಾರ್ಥಿಗಳ ಉತ್ಕøಷ್ಟತೆಯನ್ನು ಹೆಚ್ಚಿಸಲು ಅಧ್ಯಯನ ದಿನವನ್ನು ಹೆಚ್ಚಿಸುವ ಪ್ರಸ್ತಾವನೆ ಬಂದರೆ ಪ್ರತಿಭಟನೆ ಮತ್ತು ಧರಣಿ ಪ್ರಾರಂಭವಾಗುತ್ತದೆ. ಸಂಘಟನಾ ಶಕ್ತಿಯಿಂದ ಸವಲತ್ತುಗಳನ್ನು ಪಡೆಯುವುದರಲ್ಲಿ ತಪ್ಪಿಲ್ಲವಾದರೂ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಈ ಪ್ರಾಮಾಣಿಕತೆ ತೋರುತ್ತಿಲ್ಲ ಎಂಬ ವಾದವೂ ಇಲ್ಲದಿಲ್ಲ.
ರಾಜ್ಯದಲ್ಲಿ ಈ ವರ್ಷ 220 ದಿನಗಳ ಬೋಧನೆ ನಡೆಸುವ ಅಥವಾ ತರಗತಿ ನಡೆಸುವ ಸರ್ಕಾರದ ಪ್ರಸ್ತಾವನೆಯನ್ನು ಶಿಕ್ಷಕರ ಗುಂಪು ತೀವ್ರವಾಗಿ ವಿರೋಧಿಸುತ್ತಿದೆ. ಇದರಿಂದ ವಿರೋಧ ಸಂಘಟನೆಗಳ ಶಿಕ್ಷಕರು ಶನಿವಾರ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದರು. ಈ ಕುರಿತು ಚರ್ಚಿಸಲು ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಕರೆದಿದ್ದ ಸಭೆ ಒಮ್ಮತಕ್ಕೆ ಬರಲು ವಿಫಲವಾದ ನಂತರ ಪ್ರತಿಭಟನೆ ನಡೆಯಿತು.
ಹೈಕೋರ್ಟ್ ನಿರ್ದೇಶನದ ಮೇರೆಗೆ ಶೈಕ್ಷಣಿಕ ದಿನಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 25 ಶನಿವಾರಗಳು ಕೆಲಸದ ದಿನವಾಗಿದ್ದು, ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಪ್ರಕಟಿಸಲಾಗಿದೆ. ಆದರೆ, ರಜೆ ಹಿಂಪಡೆಯಲು ಬಿಡುವುದಿಲ್ಲ ಎಂದು ಶಿಕ್ಷಕರು ಪಟ್ಟು ಹಿಡಿದಿದ್ದಾರೆ. 1ರಿಂದ 8ನೇ ತರಗತಿವರೆಗಿನ ಕೆಲಸದ ದಿನವನ್ನು 200ಕ್ಕೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುವುದಾಗಿ ಸಚಿವರು ಹೇಳಿದರೂ ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ. ಸಚಿವರು ಕರೆದಿರುವ ಚರ್ಚೆ ಪ್ರಹಸನವಾಗಿತ್ತು ಎಂಬುದು ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘದ ಪ್ರತಿಕ್ರಿಯೆ.
ಶಿಕ್ಷಣ ಹಕ್ಕು ಕಾಯಿದೆಯ ಅಧ್ಯಯನದ ಸಮಯಕ್ಕೆ ಸಂಬಂಧಿಸಿದ ನಿಯಮಗಳಿಗೆ ವಿರುದ್ಧವಾಗಿ ಶೈಕ್ಷಣಿಕ ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ ಎಂಬುದು ಸಂಘಟನೆಗಳ ಆಕ್ಷೇಪ. ಶೈಕ್ಷಣಿಕ ದಿನ ವಿಸ್ತರಣೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳಾಗಲಿ, ಪೋಷಕರಾಗಲಿ ಇದುವರೆಗೂ ಯಾವುದೇ ಚರ್ಚೆಗೆ ಮುಂದಾಗಿಲ್ಲ. ಶಿಕ್ಷಕರ ಮುಷ್ಕರ ಜನತೆಗೆ ಸವಾಲಾಗಿದೆ ಎಂಬುದು ಸರ್ಕಾರದ ನಿಲುವು. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಪೂರೈಸಲು ಸಿದ್ಧರಾಗಿರಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.