ಕಾಸರಗೋಡು : ನಗರದ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ವಾಚನಾ ಸಮಾರೋಪ ಕಾರ್ಯಕ್ರಮ ನಡೆಯಿತು. ಸಮಾಜಿಕ, ಧಾರ್ಮಿಕ ಮುಂದಾಳು, ಬಾಲ ಭವನ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೈಸರ್ ಕೆ.ಎನ್.ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿನೂತನ ಪ್ರಕಾರಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿನಾಡಿನಲ್ಲಿ ಕನ್ನಡ ಕಂಪನ್ನು ಪಸರಿಸುವಲ್ಲಿ ನುಳ್ಳಿಪ್ಪಾಡಿಯ ಕನ್ನಡ ಭವನದ ಕಾರ್ಯಕ್ರಮ ಶ್ಲಾಘನೀಯ. ವಿಸ್ತೃತವಾದ ಗ್ರಂಥಾಲಯ ವಾಚನಾಲಯವನ್ನು ಸಜ್ಜುಗೊಳಿಸಿ, ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳಿಗೆ ಪುಸ್ತಕ ಸಂವಾದದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೀಡುತ್ತಿರುವ ಪ್ರೇರಣೆ ಸಮಾಜಕ್ಕೆ ದರ್ಶವಾಗಿದೆ ಎಂದು ತಿಳಿಸಿದರು.
ನಗರದ ಬಾಲ ಭವನ ಮತ್ತು ಕನ್ನಡ ಭವನ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಬಾಲಭವನ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಾಪಿಕೆ ಜಯಂತಿ, ಪರ್ತಕರ್ತ ಜಗನ್ನಾಥ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾಗಿ ಜಯಾನಂದ ಕುಮಾರ್ ಹೊಸದುರ್ಗ, ಜಯ ಮಣಿಯಂಪಾರೆ, ಪ್ರದೀಪ್ ಬೇಕಲ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಭಾಗವಹಿಸಿದ ಸುಮಾರು 50 ಮಂದಿ ವಿದ್ಯಾರ್ಥಿಗಳು ಪುಸ್ತಕಗಳೊಂದಿಗೆ ಸಂವಾದ, ಕವಿತಾ ರಚನೆ, ವರದಿ ತಯಾರಿಕೆ, ಭಜನೆ ಕಲಿಯುವಿಕೆ ಹಾಗೂ ಕೃಷಿ ಸಂಯೋಜನೆ, ಪ್ರಾಚ್ಯ ವಸ್ತು, ನಾಣ್ಯ ಸಂಗ್ರಹ ವೀಕ್ಷಣೆಯೊಂದಿಗೆ ತಮ್ಮ ಅನಿಸಿಕೆಗಳನ್ನು ಭಾಷಣ ರೂಪದಲ್ಲಿ ಪ್ರಕಟಪಡಿಸಿದರು.
ಈ ಸಂದರ್ಭ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್ ಅವರನ್ನು ಸ್ಮರಣಿಕೆ ನಿಡಿ ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ, ಪುಸ್ತಕಗಳೊಂದಿಗೆ ಅಭಿನಂದಿಸಲಾಯಿತು. ಗ್ರಂಥಾಲಯ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.