ಕಾಸರಗೋಡು: ಕೇರಳ ಸೇವಾ ಪಿಂಚಣಿದಾರರಿಗೆ ನೀಡಲು ಬಾಕಿ ಇರುವ ತುಟ್ಟಿಭತ್ತೆ ಮತ್ತು ಪಿಂಚಣಿ ಕಂತುಗಳನ್ನು ತಕ್ಷಣ ಮಂಜೂರುಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾಸಂಘದ ಕಾಸರಗೋಡು ಜಿಲ್ಲಾ ಸಭೆಯಲ್ಲಿ ಠರಾವು ಮಂಡಿಸಲಾಯಿತು.
ವೃದ್ಧಾಪ್ಯ ಕಾಲದ ಅನಾರೋಗ್ಯ ಹಾಗೂ ಬೆಲೆಯೇರಿಕೆಯೇ ಮುಂತಾದ ದೈನಂದಿನ ಸಂಕಷ್ಟ ಅನುಭವಿಸುತ್ತಿರುವ ರಾಜ್ಯ ಪಿಂಚಣಿದಾರರಿಗೆ ಪಿಂಚಣಿ ಮತ್ತು ತುಟ್ಟಿಭತ್ತೆಯ ಬಾಕಿ ಕಂತುಗಳನ್ನು ನೀಡದೆ ಸರ್ಕಾರ ಪಿಂಚಣಿದಾರರಲ್ಲಿ ತೋರುತ್ತಿರುವ ಅವಗಣನೆಯನ್ನು ಸಭೆಯಲ್ಲಿ ಖಂಡಿಸಲಾಯಿತು.
ಕಾಸರಗೋಡಿನ ಚಂದ್ರಗಿರಿ ಶ್ರೀ ಧರ್ಮಶಾಸ್ತಾ ದೇವಸ್ಥಾನ ವಠಾರದಲ್ಲಿ ನಡೆದ ಸಭೆಯಲ್ಲಿ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಿ. ಎಚ್.ಸುರೇಶ್ ಸಂಘಟನಾ ಚಟುವಟಿಕೆಗಳ ಬಗ್ಗೆ ವಿವರಿಸಿದರು. ದಯಾನಂದ. ಕೆ., ಉಮಾದೇವಿ, ದಿವಾಕರನ್ ಜಿ., ಚಂದ್ರು, ಕೆ. ಕುಞÂಕಣ್ಣನ್, ಕೆ. ಬಾಲಚಂದ್ರ, ಶ್ರೀಕಂಠನ್, ಸತೀಶ ಬಿ, ಎ.ಮುರಲೀಧರನ್ ಮೊದಲಾದವರು ಉಪಸ್ಥಿತರಿದ್ದರು. ಸಿ. ಎಚ್. ಜಯೇಂದ್ರ ಸ್ವಾಗತಿಸಿದರು. ರವೀಂದ್ರನ್ ನಾಯರ್ ವಂದಿಸಿದರು.