ಮುಳ್ಳೇರಿಯ: ವಿದ್ಯಾರ್ಥಿಯು ನಿರಂತರವಾಗಿ ಓದುವುದರಿಂದ ಆತನ ಶಬ್ಧ ಸಂಗ್ರಹವು ಹೆಚ್ಚುತ್ತದೆ. ಏಕಾಗ್ರತೆ ಸಿದ್ಧಿಸುತ್ತದೆ. ಒಳಿತು ಕೆದುಕುಳನ್ನು ಮನನ ಮಾಡಿ ಮೌಲೀಕರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಓದುವಿಕೆಯು ಜ್ಞಾನ ಹಾಗೂ ಯಶಸ್ಸಿನ ಹೆಬ್ಬಾಗಿಲು’ ಎಂದು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಬುಧವಾರದಂದು ಪಂಜಿಕಲ್ಲಿನ ಎಸ್ವಿಎಯುಪಿ ಶಾಲೆಯಲ್ಲಿ ನಡೆದ ವಾಚನಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಜಿಕಲ್ಲು ಶಾಲೆಯ ಮುಖ್ಯಶಿಕ್ಷಕ ವಿಷ್ಣುಪಾಲ ಮಾಸ್ತರ್ ಮಾತನಾಡಿ,’ಪುಸ್ತಕಗಳು ವಿದ್ಯಾರ್ಥಿಯ ಪ್ರಗತಿಯಲ್ಲಿ ಬಹಳ ಉತ್ತಮ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗೆ ಓದುವುದೇ ದೀಕ್ಷೆಯಾಗಬೇಕು. ವಾಚನಾ ಸಪ್ತಾಹ ಮುಗಿದರೂ ವಿದ್ಯಾರ್ಥಿಗಳ ವಾಚನಾ ಆಸಕ್ತಿ ಮುಗಿಯಬಾರದು. ಅದು ನಿರಂತರವಾಗಬೇಕು’ ಎಂದು ಹೇಳಿದರು. ವಾಚನಾ ಸಪ್ತಾಹದಲ್ಲಿ ಮಕ್ಕಳು ನಡೆಸಿದ ಚಟುವಟಿಕೆಗಳ ಹಸ್ತಪ್ರತಿಯಾದ ‘ನನ್ನ ಬರಹ’ ಕೃತಿಯನ್ನು ವಿರಾಜ್ ಅಡೂರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಾಚನಾ ಸಪ್ತಾಹದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿವಪ್ರಸಾದ ಮಾಸ್ತರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನಿತಾ ಟೀಚರ್ ವಂದಿಸಿದರು. ವಿನುತಾ ಟೀಚರ್ ಪ್ರಾರ್ಥನೆ ಹಾಡಿದರು. ಶಿಕ್ಷಕರಾದ ರಾಮಕೃಷ್ಣ ಮಾಸ್ತರ್, ಶಿಕ್ಷಕಿಯರಾದ ಅನುಶ್ರೀ, ನಳಿನಾಕ್ಷಿ, ಅಶ್ವಿನಿ ಮೊದಲಾದವರು ಸಹಕರಿಸಿದರು. ಬಳಿಕ ವಿರಾಜ್ ಅಡೂರು ಅವರಿಂದ ಚುಟುಕು ರಚನಾ ಕಮ್ಮಟ ನಡೆಯಿತು.