ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರುಗಿತು.
ಕೇರಳ ಚಿನ್ಮಯ ಮಿಷನ್ನ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ವೈಯಕ್ತಿಕವಾಗಿ ಗುರುತಿಸಿಕೊಳ್ಳುವಂತಹ ಉತ್ತಮ ಸಾಧನೆಗಳನ್ನು ಮಾಡುವ ವಿದ್ಯಾರ್ಥಿಗಳು ನೀವಾಗಬೇಕು. ಗುಣಮಟ್ಟದ ಶಿಕ್ಷಣ, ಅದಕ್ಕೆ ಪೂರಕವಾದ ಸಾಧನೆಯನ್ನು ಮಾಡುವ ವಿದ್ಯಾರ್ಥಿಗಳು ಜೊತೆಯಾದಾಗ ಆ ಶಿಕ್ಷಣ ಸಂಸ್ಥೆ ಬೆಳಗುತ್ತದೆ ಎಂದರು.
ಹೊಸತಾಗಿ ನಿರ್ಮಿಸಿದ ವಿದ್ಯಾರ್ಥಿ ಪಾರ್ಕ್ನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದ ಚೆಂಗಳ ಗ್ರಾಮಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ ಮಾತನಾಡಿ ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ಭಾಷೆಯನ್ನು ವಿದ್ಯಾರ್ಥಿಗಳು ಕಲಿತಿರಬೇಕು. ಮೊಬೈಲ್ ಬಳಕೆಯಿಂದ ದೂರವಿದ್ದು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.
ನೂತನ ಲ್ಯಾಬ್ ಅನ್ನು ಉದ್ಘಾಟಿಸಿ ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತ ಶುಭಹಾರೈಸಿದರು. ನಗರಸಭೆ ಸದಸ್ಯೆ ಸವಿತಾ ಕೋಳಾರಿ ಹಾಗೂ ಚಿನ್ಮಯ ಮಿಷನ್ ಕಾರ್ಯದರ್ಶಿ ಬಾಲಚಂದ್ರನ್ ಉಪಸ್ಥಿತರಿದ್ದರು. ಶಾಲಾ ಕಟ್ಟಡದ ಅಭಿಯಂತರ ಗೋವಿಂದ, ನಿರ್ಮಾಣಕ್ಕಾಗಿ ಸಹಕರಿಸಿದ ಶಾಲೆಯ ಆಡಳಿತ ಸಹಾಯಕ ಧೀರಜ್ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಕ್ಯಾಂಪಸ್ ಪ್ರಬಂಧಕ ಗಣೇಶ್ ನಾಯರ್ ಇವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಯ ಮೇಲ್ವಿಚಾರಕÀ ಪ್ರಶಾಂತ್ ಬೆಳಿಂಜ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಮಾನಸ ವಂದಿಸಿದರು. ಶಾಲಾ ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು.