ಗಡ್ಚಿರೋಲಿ: ಮಹಾರಾಷ್ಟ್ರ ಹಾಗೂ ಛತ್ತೀಸಗಢ ಗಡಿಯಲ್ಲಿರುವ ಗಡ್ಚಿರೋಲಿ ಜಲ್ಲೆಯಲ್ಲಿ ಸಕ್ರಿಯವಾಗಿದ್ದ ನಕ್ಸಲ್ ಶಿಬಿರವನ್ನು ಪತ್ತೆ ಹಚ್ಚಲಾಗಿದೆ. ಆದರೆ, ಭದ್ರತಾ ಸಿಬ್ಬಂದಿಯನ್ನು ಕಾಣುತ್ತಿದ್ದಂತೆ ನಕ್ಸಲರು ಅರಣ್ಯ ಪ್ರದೇಶಕ್ಕೆ ನುಗ್ಗಿ, ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕುಮಾರ್ ಛಿಂಟಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ, ಸಿ-60 ಕಮಾಂಡರ್ ಪಡೆ ಮತ್ತು ಸಿಆರ್ಪಿಎಫ್ ತಂಡ ಜಿಲ್ಲೆಯ ಭಿಮನ್ಖೋಜಿಯಲ್ಲಿರುವ ನಕ್ಸಲ್ ಶಿಬಿರವನ್ನು ಪತ್ತೆಮಾಡಿವೆ ಎಂದು ಗಡ್ಚಿರೋಲಿ ಎಸ್ಪಿ ನಿಲೋತ್ಪಾಲ್ ಹೇಳಿದ್ದಾರೆ.
'ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದಂತೆ ನಕ್ಸಲರು ಅರಣ್ಯ ಪ್ರದೇಶಕ್ಕೆ ನುಗ್ಗಿ ಪರಾರಿಯಾಗಿದ್ದಾರೆ. ಶಿಬಿರದಲ್ಲಿದ್ದ ಬ್ಯಾಗ್ಗಳು, ಪುಸ್ತಕ ಹಾಗೂ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ಎಸ್ಪಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಮೂರನೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಇದಾಗಿದೆ.
ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಶುಕ್ರವಾರ ನಡೆದ ಗುಂಡಿನ ಕಾಳಗದಲ್ಲಿ 7 ನಕ್ಸಲರು ಹತ್ಯೆಯಾಗಿದ್ದರು. ಅದೇ ವೇಳೆ ಮೂವರು ಯೋಧರೂ ಗಾಯಗೊಂಡಿದ್ದರು.