HEALTH TIPS

ಹಾಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹ್ಯಾಟ್ರಿಕ್ ಗೆಲುವು-ಲಕ್ಷ ದಾಟಿದ ಬಹುಮತದ ಅಂತರ


            ಕಾಸರಗೋಡು: ಲೋಕಸಭಾ ಕ್ಷೇತ್ರದ ಐಕ್ಯರಂಗ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 40ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಈ ಬಾರಿ ಗೆಲುವಿನ ಅಂತರ ಎರಡು ಪಟ್ಟಿಗಿಂತಲೂ  ಹೆಚ್ಚಾಗಿರುವುದು ಎಡರಂಗ ಪಾಳಯದಲ್ಲಿ ನಡುಕಕ್ಕೆ ಕಾರಣವಾಗಿದೆ. ಬಿಜೆಪಿಯ ಎಂ.ಎಲ್ ಅಶ್ವಿನಿ ಅವರು ಕಳೆದಬಾರಿ ರವೀಶ್ ತಂತ್ರಿ ಕುಂಟಾರು ಪಡೆದುಕೊಂಡಿದ್ದ ಬಹುಮತವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.  ರಾಜ್‍ಮೋಹನ್ ಉಣ್ಣಿತ್ತಾನ್ ಗೆಲುವು ಖಚಿತಗೊಳ್ಳುತ್ತಿದ್ದಂತೆ ಐಕ್ಯರಂಗ ಕಾರ್ಯಕರ್ತರು ಜಿಲ್ಲೆಯ ನಾನಾಕಡೆ ಭಾರೀ ಸಂಖ್ಯೆಯಲ್ಲಿ ಒಟ್ಟುಸೇರಿ ಸುಡುಮದ್ದು ಪ್ರದರ್ಶನದೊಂದಿಗೆ ಸಂಭ್ರಮಾಚರಿಸಿದರು. 

               ಕಾಸರಗೋಡಿನಲ್ಲಿ ಐಕ್ಯರಂಗ ಸತತ ಎರಡನೇಬಾರಿಗೆ ಗೆಲುವು ದಾಖಲಿಸಿಕೊಂಡಿದೆ.  ಕಾಂಗ್ರೆಸ್ ನೇತೃತ್ವದ ಐಕ್ಯರಂಗದಿಂದ ಹಾಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಸಿಪಿಎಂ ನೇತೃತ್ವದ ಎಡರಂಗದಿಂದ ಕಾಸರಗೋಡು ಜಿಪಂ ಮಾಜಿ ಅಧ್ಯಕ್ಷ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎಯಿಂದ ಮಹಿಳಾಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಪ್ರಮುಖ ರಾಜಕೀಯ ಪಕ್ಷಗಳಿಂದ ಸ್ಪರ್ಧೆಗಿಳಿದಿದ್ದರು. 

             ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡು, ತೃಕ್ಕರಿಪುರ ಹಾಗೂ ಕಣ್ಣೂರು ಜಿಲ್ಲೆಯ ಪಯ್ಯನ್ನೂರು, ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕಾಸರಗೋಡು ಲೋಕಸಭಾ ಕ್ಷೇತ್ರದ ಜನತೆ ಇದುವರೆಗೂ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷವನ್ನು ಅದಲುಬದಲಾಗಿ ಗೆಲ್ಲಿಸಿಕೊಂಡು ಬಂದಿದ್ದು, 2019ರಿಂದ ನಿರಂತರವಾಗಿ ಐಕ್ಯರಂಗ  ಅಭ್ಯರ್ಥಿಯಾಗಿ ರಾಜ್‍ಮೋಹನ್ ಉಣ್ಣಿತ್ತಾನ್ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

           1977ರಲ್ಲಿ ಮತ್ತೆ ಸಿಪಿಎಂನ ಎಂ. ರಾಮಣ್ಣ ರೈ ಅವರನ್ನು ಕಡನ್ನಪಳ್ಳಿ ರಾಮಚಂದ್ರನ್ ಪರಾಭವಗೊಳಿಸಿದ್ದರು. 1980ರಲ್ಲಿ ಕಾಸರಗೋಡು ಕ್ಷೇತ್ರವನ್ನು ಸಿಪಿಎಂ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡರೂ, 1984ರ ಚುನಾವಣೆಯಲ್ಲಿ ಸಿಪಿಎಂನ ಇ.ಬಾಲಾನಂದನ್ ಅವರನ್ನು ಪರಾಭವಗೊಳಿಸುವ ಮೂಲಕ ಕಾಂಗ್ರೆಸ್‍ನ ಐ.ರಾಮರೈ ಲೋಕಸಭೆಗೆ ಆಯ್ಕೆಯಾಗಿದ್ದರು. 1989ರಲ್ಲಿ ಮತ್ತೆ ಸಿಪಿಎಂನ ಎಂ. ರಾಮಣ್ಣ ರೈ ಅವರು ಲೋಕಸಭೆಗೆ ಆಯ್ಕೆಯಾಗುವ ಮೂಲಕ 2019ರ ವರೆಗಿನ ಮೂರು ದಶಕಗಳ ಕಾಲ ಕ್ಷೇತ್ರದ ಜನತೆ ಸಿಪಿಎಂ ಅಭ್ಯರ್ಥಿಗಳನ್ನೇ ಆಯ್ಕೆಮಾಡಿ ಕಳುಹಿಸಿಕೊಟ್ಟಿದ್ದಾರೆ. 2019ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‍ನ ರಾಜ್‍ಮೋಹನ್ ಉಣ್ಣಿತ್ತಾನ್ ಅವರನ್ನು ಆಯ್ಕೆಮಾಡಿದ್ದು, 2024ರ ಚುನಾವಣೆಯಲ್ಲಿ ಇವರನ್ನೇ ಪುನರಾಯ್ಕೆಗೊಳಿಸಿದ್ದಾರೆ.

ಚರಿತ್ರಾರ್ಹ ಗೆಲುವು:

             ಕೇರಳದ ಜನತೆ ಹೆಚ್ಚು ಕಾತರದಿಂದ ನಿರೀಕ್ಷಿಸುತ್ತಿದ್ದ ತೃಶ್ಯೂರ್ ಲೋಕಸಭಾ ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿ ಸುರೇಶ್‍ಗೋಪಿ 74600ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸುರೇಶ್‍ಗೋಪಿ ಗೆಲುವಿನೊಂದಿಗೆ ಕೇರಳದ ಲೋಕಸಭಾ ಚುನಾವಣೆಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಖಾತೆ ತೆರೆದಿದೆ. ಕೇರಳದ ಒಟ್ಟು 20ಕ್ಷೇತ್ರಗಳಲ್ಲ ಐಕ್ಯರಂಗ 18, ಎಡರಂಗ ಹಾಗೂ ಎನ್‍ಡಿಎ ತಲಾ ಒಂದು ಸ್ಥಾನ ಪಡೆದುಕೊಂಡಿದೆ. ಎಡರಂಗದ ಹಾಲಿ ಸಚಿವ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries