ಕಾಸರಗೋಡು: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಮಂಗಳೂರು ಇದರ ಸಿಎಸ್ ಆರ್ ನಿಧಿಯಿಂದ ಕಾಸರಗೋಡು ತಾಳಿಪಡ್ಪು ಶ್ರೀ ಸತ್ಯಸಾಯಿ ಅಭಯ ನಿಕೇತನಕ್ಕೆ ಮಂಜೂರಾದ ಶಾಲಾ ವಾಹನದ ಕೀಲಿಕೈ ಹಸ್ತಾಂತರ ಸಮಾರಂಭ ಅಭಯನಿಕೇತನ ವಠಾರದಲ್ಲಿ ಜರುಗಿತು.
ಕರ್ಣಾಟಕ ಬ್ಯಾಂಕ್ ಮಂಗಳೂರು ಡಿಜಿಎಂ ವಸಂತ ಆರ್ ಹೇರ್ಳೆ ಅವರು ಸತ್ಯಸಾಯಿ ಅಭಯನಿಕೇತನ ಅಧ್ಯಕ್ಷ ಡಾ.ಬಿ.ಎಸ್.ಖಂಡಿಗೆ ಅವರಿಗೆ ಕೀಲಿಕೈ ಹಸ್ತಾಂತರಿಸಿದರು. ಈ ಸಂದರ್ಭ ನಡೆದ ಸಮಾರಂಭದಲ್ಲಿ ಬಿಎಸ್ಎಸ್ ಅಭಯನಿಕೇತನ ಅಧ್ಯಕ್ಷ ಡಾ.ಬಿ.ಎಸ್.ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಮುಖ್ಯ ಪ್ರಬಂಧಕ ಕೆ.ಸುಜಿತ್ ಕುಮಾರ್, ಕಾಸರಗೋಡು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವಕೀಲ ಎ.ಶ್ರೀಜಿತ್, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್, ಕರ್ಣಾಟಕ ಬ್ಯಾಂಕ್ ಕಾಸರಗೋಡು ಶಾಖಾ ಪ್ರಬಂಧಕ ಎ.ಹರಿಲಾಲ್ ಉಪಸ್ಥಿತರಿದ್ದರು. ಈ ಸಂದರ್ಭ ಕೆ.ಎಂ.ಕೆ ನಂಬಿಯಾರ್ ಅವರನ್ನು ಗೌರವಿಸಲಾಯಿತು. ಬಿಎಸ್ಎಸ್ ಅಭಯನಿಕೇತನ ಕಾರ್ಯದರ್ಶಿ ಪಿ.ಲತಾ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಬಿ.ಪ್ರೇಂಪ್ರಕಾಶ್ ವಂದಿಸಿದರು.