ವಯನಾಡು: ಮುಳಂಕಾವ್ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗೆ ಸಹಪಾಠಿಗಳು ಅಮಾನುಷವಾಗಿ ಥಳಿಸಿದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
ಅಮಾನತು ಏಳು ದಿನಗಳವರೆಗೆ ಇರಲಿದೆ. ಘಟನೆಯ ತನಿಖೆಗೆ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರಿಂದ ವರದಿ ಕೇಳಿದೆ. ವಿವರಣೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಇ ಶಶೀಂದ್ರವ್ಯಾಸ್ ಮಾಹಿತಿ ನೀಡಿದರು. ಮುಳಂಕಾಂವ್ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಬರೀನಾಥ್ ಎಂಬಾತನಿಗೆ ಸಹಪಾಠಿಗಳು ಥಳಿಸಿದ್ದಾರೆ.
ಪರಸ್ಪರ ಪರಿಚಯ ಮಾಡಿಕೊಳ್ಳುವ ಹೆಸರಿನಲ್ಲಿ ತರಗತಿಯಿಂದ ಹೊರಗೆ ಎಳೆದೊಯ್ದು ಥಳಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ದೇಹದ ಹಲವೆಡೆ ಕತ್ತರಿಯಿಂದ ಇರಿಯಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ಮೊದಲು ನೂಲ್ಪುಳದ ಆಸ್ಪತ್ರೆಗೆ ದಾಖಲಿಸಿ ನಂತರ ಸುಲ್ತಾನ್ ಬತ್ತೇರಿಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಥಳಿಸುವ ವೇಳೆ ಕತ್ತರಿಯಿಂದ ಇರಿದಿದ್ದು, ಆಸ್ಪತ್ರೆಗೆ ಕರೆದೊಯ್ದರೂ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಬಾಲಕನ ಮನೆಯವರು ಹೇಳುತ್ತಾರೆ. ಸದ್ಯ ಮಗುವಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ.
ನಾಳೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೋಲೀಸರು ಶಬರಿನಾಥ್ ಕುಟುಂಬಕ್ಕೆ ತಿಳಿಸಿದ್ದಾರೆ. ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೇರೆ ಶಾಲೆಯಿಂದ ವಿದ್ಯಾರ್ಥಿಯನ್ನು ಈ ವರ್ಷ ಮುಳಂಕಾವ್ ಶಾಲೆಗೆ ಸೇರಿಸಲಾಗಿತ್ತು. ಆತನ ಕುತ್ತಿಗೆ, ಕಿವಿ ಮತ್ತು ತಲೆಗೆ ಗಾಯಗಳಾಗಿವೆ ಎಂದು ಪೋಷಕರು ತಿಳಿಸಿದ್ದಾರೆ.