ಕಾಸರಗೋಡು: ಚಿತ್ತಾರಿಕಲ್ ಗ್ರಾಮದ ರಾವಣೇಶ್ವರ ಪಾಡಿಕಾನಂ ನಿವಾಸಿ ಪಿ.ಎ ಕುಮಾರನ್(57)ಎಂಬವರನ್ನು ಕೊಲೆಗೈದು, ಅವರ ಪತ್ನಿ, ಪುತ್ರನ ಕೊಲೆಗೆ ಯತ್ನಿಸಿದ ಪ್ರಕರಣದದಲ್ಲಿ ಸಹೋದರರು ಒಳಗೊಂಡಂತೆ ನಾಲ್ಕು ಮಂದಿಗೆ ವಿವಿಧ ಸೆಕ್ಷನ್ಗಳಲ್ಲಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ಎ. ಮನೋಜ್ ಅವರು 18ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 7.55ಲಕ್ಷ ರೂ. ದಂಡ ವಿಧಿಸಿದ್ದಾರೆ.
ರಾವಣೇಶ್ವರ ಪಡಿಕಾನ ನಿವಾಸಿ ಶ್ರೀಧರನ್ ಪಿ.ಎ, ನಾರಾಯಣನ್ ಪಿ.ಎ, ಪದ್ಮನಾಭನ್ ಪಿ.ಎ ಹಾಗೂ ನಾರಾಯಣನ್ ಅವರ ಪುತ್ರ ಸಂದೀಪ್ ಪಿ.ಎ ಎಮಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. 2016 ಡಿಸೆಂಬರ್ 31ರಂದು ರಾತ್ರಿ ಘಟನೆ ನಡೆದಿದೆ. ಕುಮಾರನ್ ಅವರ ಹಿತ್ತಿಲಲ್ಲಿ ಕೊಳವೆಬಾವಿ ನಿರ್ಮಾಣಕ್ಕಾಗಿ ಆಗಮಿಸಿದ ವಾಹನಕ್ಕೆ ತಂಡ ತಡೆಯೊಡ್ಡಿದ್ದು, ಈ ಸಂದರ್ಭ ಕುಮಾರನ್ ಹಾಗೂ ಆರೋಪಿಗಳ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ಸಂದರ್ಭ ಘರ್ಷಣೆ ನಡೆದು ಕೊಲೆಯಲ್ಲಿ ಅಂತ್ಯ ಕಂಡಿತ್ತು. ಈ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.