ಕುಂಬಳೆ : ಕುಂಬಳೆ ಸನಿಹದ ಆರಿಕ್ಕಾಡಿ ಹನುಮಾನ್ ಕ್ಷೆತ್ರ ಸನಿಹ ಹೆದ್ದಾರಿಯಲ್ಲಿ ಡಇವೈಡರ್ಗೆ ಬೈಕ್ ಡಿಕ್ಕಿಯಾಗಿ, ಬಂಬ್ರಾಣ ಉಜಾರು ನಿವಾಸಿ, ದಿ. ಅಮ್ಮುಶೆಟ್ಟಿ ಅವರ ಪುತ್ರ ಅಜಿತ್ ಶೆಟ್ಟಿ(31)ದಾರುಣವಾಗಿ ಮೃತಪಟ್ಟಿದ್ದಾರೆ. ತಮ್ಮ ಬುಲ್ಲೆಟ್ ಬೈಕಲ್ಲಿ ಕುಂಬಳೆಯಿಂದ ಆಹಾರಸಾಮಗ್ರಿ ಖರೀದಿಸಿ ಸೋಮವಾರ ರಾತ್ರಿ ಮನೆಗೆ ವಾಪಸಾಗುವ ಮಧ್ಯೆ, ರಸ್ತೆ ಅಂಚಿಗೆ ಅಳವಡಿಸಿದ್ದ ಡಿವೈಡರ್ಗೆ ಡಿಕ್ಕಿಯಾಗಿ ಬೈಕ್ ಪಲ್ಟಿಯಾಗಿ ಅಜಿತ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಸಾವು ಸಂಭವಿಸಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಇವರು, ಭಾನುವಾರ ನಡೆದ ತನ್ನ ಪತ್ನಿಯ ಸೀಮಂತ ಮದುವೆಗಾಗಿ ಊರಿಗೆ ಆಗಮಿಸಿದ್ದರು.
ಅವೈಜ್ಞಾನಿಕ ಡಿವೈಡರ್ ಅಳವಡಿಕೆ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ನಡೆಯುವ ಕೆಲಸಗಳಿಗಾಗಿ ರಸ್ತೆಯಲ್ಲಿ ಅಲ್ಲಲ್ಲಿ ಅಸಮರ್ಪಕವಾಗಿ ಡಿವೈಡರ್ ಅಳವಡಿಸಲಾಗುತ್ತಿದ್ದು, ಇದು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಚಾಲಕರು ಅಭಿಪ್ರಾಯಪಡುತ್ತಿದ್ದಾರೆ. ಕಾಮಗಾರಿ ಹಿನ್ನೆಲೆಯಲ್ಲಿ ಪ್ರತಿ ದಿನ ಅದಲುಬದಲಾಗಿ ಡಿವೈಡರ್ ಅಳವಡಿಸಲಾಗುತ್ತಿದ್ದು, ಇದಕ್ಕೆ ಸೂಕ್ತ ರೀತಿಯ ಸೂಚನಾಫಲಕ ಅಥವಾ ರಿಪ್ಲೆಕ್ಟರ್ ಅಳವಡಿಸುತ್ತಿಲ್ಲ ಎಂಬ ದೂರೂ ವ್ಯಾಪಕಗೊಂಡಿದೆ. ವಾರದ ಹಿಂದೆ ಆರಿಕ್ಕಾಡಿ ಸನಿಹ ಬೈಕ್ ಪಲ್ಟಿಯಾಗಿ ವಿದ್ಯಾರ್ಥಿ ಮೃತಪಟ್ಟಿದ್ದನು.