ಮಂಜೇಶ್ವರ: ಬಿರುಸಿನ ಮಳೆಯಿಂದ ನಂದಾರಪದವು-ತಿರುವನಂತಪುರ ಮಲೆನಾಡು ಹೆದ್ದಾರಿ ಹಾದುಹೋಗುವ ವರ್ಕಾಡಿ ಸುಂಕದಕಟ್ಟೆ ಜಂಕ್ಷನ್ ಬಳಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ರಸ್ತೆ ಕೊಳಚೆನೀರಿನಿಂದ ತುಂಬಿಕೊಳ್ಳುವಂತಾಗಿದೆ.
ತ್ಯಾಜ್ಯಯುಕ್ತ ನೀರು ತುಂಬಿಕೊಳ್ಳುವ ರಸ್ತೆಯ ಅಂಚಿಗೇ ಪ್ರಯಾಣಿಕರ ತಂಗುದಾಣವಿದ್ದು, ಪ್ರಯಾಣಿಕರಿಗೆ ಇಲ್ಲಿ ನಿತ್ಯ ಕೆನ್ನೀರಿನ ಸಿಂಚನವಾಗುತ್ತಿದೆ. ವರ್ಕಾಡಿ ಗ್ರಾಮ ಪಂಚಾಯಿತಿ, ಕೃಷಿಭವನ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಈ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದು, ಇಲ್ಲಿಗೆ ಆಗಮಿಸುವವರು ಇದೇ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಕೆಲವೇ ವರ್ಷದ ಹಿಂದೆ ರಸ್ತೆಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆಯಿಂದ ಮಳೆನೀರು ರಸ್ತೆಯಲ್ಲಿ ಹರಿಯುವುದರ ಜತೆಗೆ, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲಾಗದೆ ಕಲುಷಿತ ನೀರೂ ರಸ್ತೆಯಲ್ಲಿ ಹರಿಯುವಂತಾಗಿದೆ. ಚರಂಡಿ ವ್ಯವಸ್ಥೆ ತಕ್ಷಣ ಸರಿಗೊಳಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.