ತಿರುವನಂತಪುರಂ: ತಲಶ್ಶೇರಿಯಲ್ಲಿ ಜನವಸತಿ ಇಲ್ಲದ ಮನೆ ಸಮೀಪ ತೆಂಗಿನಕಾಯಿ ಸಂಗ್ರಹಿಸಲು ಬಂದಿದ್ದ 85 ವರ್ಷದ ವ್ಯಕ್ತಿಯೊಬ್ಬರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಘಟನೆಯನ್ನು ಪ್ರತಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸಿದವು.
ಎ.ಕೆ.ಬಾಲನ್ ಹೇಳಿದಂತೆ ಸಿಪಿಎಂ ಚಿಹ್ನೆ ಕಳೆದುಕೊಂಡರೆ, ಕತ್ತಿಯೂ-ಸುತ್ತಿಗೆಯೂ ಇಲ್ಲದೆ ಬಾಂಬ್ ಸಾಕು ಎಂದು ಶಾಸಕ ಸನ್ನಿ ಎಂ ಜೋಸೆಫ್ ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ದಿ. ಕನ್ನೋಳಿ ಮೋಹನ್ ದಾಸ್ ಅವರ ನಿವಾಸದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಜನವಸತಿ ಇಲ್ಲದೆ, ಬೀಗಹಾಕಲ್ಪಟ್ಟಿರುವ ಮೋಹನ್ ದಾಸ್ ಅವರ ಆ ಮನೆಗೆ ಬಾಂಬ್ ಅನ್ನು ಉದ್ದೇಶಪೂರ್ವಕವಾಗಿ ತಂದಿರುವುದಾಗಿಯೂ ಸನ್ನಿ ಜೋಸೆಫ್ ಆರೋಪಿಸಿದ್ದಾರೆ. ಮೃತರಾದ ವೇಲಾಯುಧನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಣ್ಣೂರು ಜಿಲ್ಲೆಯ ಶಾಂತಿಯುತ ವಾತಾವರಣ ಕದಡುವ ಇಂತಹ ಘಟನೆಗಳನ್ನು ಮುಂದಿರಿಸಿ ಚರ್ಚೆ ನಡೆಸಬೇಕು ಎಂದು ಸನ್ನಿ ಎಂ ಜೋಸೆಫ್ ಆಗ್ರಹಿಸಿದರು. ಆದರೆ ತುರ್ತು ಮನವಿಗೆ ಅನುಮತಿ ನಿರಾಕರಿಸಲಾಯಿತು.
ಜೊತೆಗೆ ಪೋಲೀಸರು ಬರುವ ಮುನ್ನ ಬಾಂಬ್ ಸ್ಪೋಟ ಸಂಬಂಧ ಸಂಪರ್ಕವಿದ್ದವರು ಘಟನಾ ಸ್ಥಳವನ್ನು ಸುತ್ತುವರೆದು ಬಾಂಬ್ನ ಅವಶೇಷಗಳನ್ನು ತೆಗೆದು ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಸನ್ನಿ ಎಂ ಜೋಸೆಫ್ ಆರೋಪಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಸತ್ತವರ ಸ್ಮಾರಕಗಳನ್ನು ನಿರ್ಮಿಸುವ ಪಕ್ಷ ಆಡಳಿತ ಪಕ್ಷ ಎಂದು ಸನ್ನಿ ಎಂ ಜೋಸೆಫ್ ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಕಕ್ಕಾಟ್, ಮಣಿಯೂರು ಮತ್ತು ಕೂತುಪರಂಬಗಳಲ್ಲಿ ವಿವಿಧ ವಿರೋಧ ಪಕ್ಷದ ನಾಯಕರ ಮನೆಗಳ ಮೇಲೆ ಬಾಂಬ್ಗಳನ್ನು ಎಸೆಯಲಾಯಿತು. ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸನ್ನಿ ಎಂ ಜೋಸೆಫ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ವ್ಯಂಗ್ಯವಾಡಿದರು. ಮೃತರು ಜನವಸತಿ ಇಲ್ಲದ ಮನೆ ಸಮೀಪ ತೆಂಗಿನಕಾಯಿ ಹೆಕ್ಕಲು ಬಂದಿದ್ದರು. ಅಪರಿಚಿತ ಸ್ಟೀಲ್ ವಸ್ತು ಪತ್ತೆಯಾದಾಗ ಅದನ್ನು ಎತ್ತಿದ್ದು, ಅದು ಸಿಡಿದು ಕೈ ಛಿದ್ರಗೊಂಡು ಮೃತರಾದರು. ಮುಖವೂ ಛಿದ್ರಗೊಂಡಿತ್ತು. ಪಕ್ಷದಲ್ಲಿನ ಎರಡು ಬಣಗಳ ನಡುವಿನ ಸಂಘರ್ಷವೇ ಬಾಂಬ್ ತಯಾರಿಕೆಯ ಹಿಂದೆ ಇದೆ. ಇದು ಅವರದೇ ಪಕ್ಷದವರಿಗಾಗಿ ತಯಾರಿಸಿದ ಬಾಂಬ್ ಎಂದು ಸತೀಶನ್ ಆರೋಪಿಸಿದ್ದಾರೆ.
ವಯೋವೃದ್ಧರು ಸಾವನ್ನಪ್ಪಿರುವ ಘಟನೆ ದುರದೃಷ್ಟಕರ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ತಡೆಯಲಾಗುವುದು. ಬಾಂಬ್ ತಯಾರಿಕೆಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.