ಕಾಸರಗೋಡು: ಪಕ್ಷದಿಂದ ಅಮಾನತುಗೊಂಡಿರುವ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ ಅವರು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ವಿರುದ್ಧ ನಡೆಸಿರುವ ಆರೋಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಯುವ ಜನತಾದಳ ಜಿಲ್ಲಾಧ್ಯಕ್ಷ ಸಿ.ಪಿ.ರಹೀಜ್ ಸುಲ್ತಾನ್ ಸುದ್ದಿಗೋಷ್ಠೀಯಲ್ಲಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಹೈಮಾಸ್ ಲೈಟ್ ಅಳವಡಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದೊಡ್ಡುವ ರೀತಿಯಲ್ಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ನಡೆಸಿರುವ ಪರಾಮರ್ಶೆ ಗಂಭೀರ ವಿಷಯವಾಗಿದೆ.
ಈ ಎರಡು ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ. ಸ್ಥಳೀಯಾಡಳಿತ ಸಂಸ್ಥೆಗಳು ನಡೆಸಬೇಕಾದ ಬೀದಿ ದೀಪ ಅಳವಡಿಕೆ ವಿಷಯದಲ್ಲಿ ಸಂಸದರೊಬ್ಬರು ಯಾಕಾಗಿ ಅತ್ಯುತ್ಸಾಹ ತೋರುತ್ತಿದ್ದಾರೆ ಎಂಬ ಬಗ್ಗೆ ಪರಾಮರ್ಶೆ ಅಗತ್ಯ. ಕಾಸರಗೋಡಿನಂತಹ ಹಿಂದುಳಿದ ಜಿಲ್ಲೆಯಲ್ಲಿ ಜನ ಸಾಮಾನ್ಯರನ್ನು ಬಾಧಿಸುವ ಹಲವು ಸಮಸ್ಯೆಗಳಿದ್ದು, ಕಾಸರಗೋಡು ಇಂದಿಗೂ ಹಿಂದುಳಿದಿರುವ ಜಿಲ್ಲೆ ಎಂದೇ ಕುಖ್ಯಾತಿಗೆ ಕಾರಣವಾಗಿದೆ.
ಕರಾವಳಿ ಪ್ರದೇಶಗಳು ಸೇರಿದಂತೆ ಕಾಸರಗೋಡಿನ ಜನತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವುಗಳಲ್ಲಿ ಯಾವುದಕ್ಕೂ ಹೆಚ್ಚು ಗಮನ ಕೊಡದೆ, 234 ಹೈಮಾಸ್ಟ್ ದೀಪಗಳು. ಜಿಲ್ಲೆಯಾದ್ಯಂತ ಸ್ಥಾಪಿಸಿರುವುದು ಬಿಟ್ಟರೆ, ಸಂಸದರಾಗಿ ಮಹತ್ವದ ಕೆಲಸ ಯಾವುದೂ ಸಾಧಿಸಲಾಗಿಲ್ಲ. ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಸಂಸದರಾಗಿ ಇಲ್ಲಿಯವರೆಗೆ ನಡೆಸಿರುವುದಾಗಿ ಹೇಳಿಕೊಳ್ಳುವ ಎಲ್ಲಾ ಅಭಿವೃದ್ಧಿ ಯೋಜನೆಗಳಲ್ಲಿನ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಬೇಕು. ಈ ಬಗ್ಗೆ ಯುವಜನತಾದಳದ ನೇತೃತ್ವದಲ್ಲಿ ವಿವಿಧ ಇಲಾಖೆಗಳಲ್ಲಿ ದೂರು ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿನ್ಸನ್ ಜೋಸ್. ರಾಜ್ಯ ಪರಿಷತ್ ಸದಸ್ಯ. ಸುಮಾ ರಾಜೇಶ್, ಜಿಲ್ಲಾ ಕೋಶಾಧಿಕಾರಿ ಅಜೀಜ್ ಕುನ್ನಿಲ್ ಉಪಸ್ಥಿತರಿದ್ದರು.