ಕಾಸರಗೋಡು : ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಅಧಿಕಾರಿಗಳಿಂದ ಜನದ್ರೋಹಕರ ಆಡಳಿತ ನಡೆಸುತ್ತಿದ್ದು, ಸರ್ಕಾರದ ನೀತಿಯಿಂದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ.
ಅವರು ಲೈಫ್ ಮಿಷನ್ ವಸತಿ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಾವಿತ್ರಿ ಎಂಬ ಮಹಿಳೆಯನ್ನು ಮೊಗ್ರಾಲ್ಪುತ್ತೂರು ಪಂಚಾಯಿತಿ ಕಛೇರಿಯಲ್ಲಿ ದಿಗ್ಬಂಧನ ವಿದಿಸಿದ ಘಟನೆ ವಿರೋಧಿಸಿ ಕಾಸರಗೋಡು ನಗರ ಪೊಲೀಸ್ ಠಾಣೆ ಎದುರು ಮಂಡಲ ಮಹಿಳಾಮೋರ್ಚಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಲೈಫ್ ವಸತಿ ಯೋಜನೆಯನ್ವಯ ಮನೆ ಮಂಜೂರು ಮಾಡಿರುವುದನ್ನು ತಿಳಿದು ಸಾವಿತ್ರಿ ಅವರು ತಮ್ಮ ಹಳೇ ಮನೆಯನ್ನು ಕೆಡವಿ, ಹೊಸ ಮನೆಗಾಗಿ ಇದಿರುನೋಡುತ್ತಿರುವ ಮಧ್ಯೆ ಈ ಮನೆಯನ್ನು ಬೇರೆಯವರಿಗೆ ಮಂಜೂರು ಮಾಡುವ ಮೂಲಕ ವಂಚಿಸಿದ್ದರು. ಈ ಮಧ್ಯೆ ತಾನು ಮನೆಗಾಗಿ ನೀಡಲಾದ ದಾಖಲೆಗಳನ್ನು ವಾಪಾಸುಮಾಡುವಂತೆ ಪಂಚಾಯಿತಿ ಕಚೇರಿಗೆ ತೆರಳಿದ್ದ ಸಾವಿತ್ರಿ ಅವರನ್ನು ಗ್ರಾಮ ವಿಸ್ತರಣಾಧಿಕಾರಿ ಎಂ.ಅಬ್ದುಲ್ ನಾಸರ್ ಪಂಚಾಯಿತಿ ಕೊಠಡಿಯೊಳಗೆ ಕೂಡಿಹಾಕಿರುವುದಾಗಿ ಆರೋಪಿಸಲಾಗಿದೆ. ಪೆÇಲೀಸ್ ಠಾಣೆ, ಪಂಚಾಯಿತಿ ಕಚೇರಿ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿಯೂ ಮಹಿಳೆಯರಿಗೆ ರಕ್ಷಣೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಾವಿತ್ರಿ ಅವರಿಗೆ ದಾಖಲೆಗಳನ್ನು ವಾಪಸ್ ನೀಡುವುದರ ಜತೆಗೆ, ಮಹಿಳೆಯನ್ನು ಕೊಠಡಿಯೊಳಗೆ ಕೂಡಿಹಾಕಿ ದಿಗ್ಬಂಧನ ವಿಧಿಸಿದ ಅಧಿಕಾರಿಯನ್ನು ಜಾಮೀನು ರಹಿತ ಸೆಕ್ಷನ್ ಮೂಲಕ ಬಂಧಿಸಬೇಕು ಎಂದು ಅಶ್ವಿನಿ ಆಗ್ರಹಿಸಿದರು. ಮಹಿಳಾ ಮೋರ್ಚಾ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಲಲಿತಾ ಪ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಪುಷ್ಪಾಗೋಪಾಲನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್, ಮಹಿಳಾ ಮೋರ್ಚಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀಲತಾ ಟೀಚರ್ ಉಪಸ್ಥಿತರಿದ್ದರು.