ಕಾಸರಗೋಡು: ಬೇಕಲಕೋಟೆಗೆ ತಲುಪಿದ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ನಡೆಸಿದ ತಂಡವೊಂದು ಅವರ ವಶದಲ್ಲಿದ್ದ 5ಸಾವಿರ ರೂ. ನಗದು ಹಾಗೂ ಕೈಯಲ್ಲಿದ್ದ ಚಿನ್ನದ ಬ್ರೇಸ್ಲೆಟ್ ದೋಚಿದ್ದಾರೆ. ಕಾರಡ್ಕದ 19ರ ಹರೆಯದ ಯುವಕ ಹಾಗೂ ಈತನ ಪ್ರಿಯತಮೆಗೆ ಹಲ್ಲೆ ನಡೆಸಿ, ದರೋಡೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಳ್ಳಿಕೆರೆ ನಿವಾಸಿ ಅಬ್ದುಲ್ ವಾಹಿದ್, ಬೇಕಲ ಹದ್ದಾದ್ ನಗರ ನಿವಾಸಿ ಅಹಮ್ಮದ್ ಕಬೀರ್ ಹಗೂ ಮವ್ವಲ್ ನಿವಾಸಿ ಶ್ರೀಜಿತ್ ಬಂಧಿತರು. ಇನ್ನೊಬ್ಬ ಆರೋಪಿ ಸಾದಿಕ್ ಪರಾರಿಯಾಗಿದ್ದಾನೆ.
ಯುವಕ ಹಾಗೂ ಯುವತಿ ಸೋಮವಾರ ಮಧ್ಯಾಹ್ನ ಬೇಕಲ ಕೋಟೆ ಸಂದರ್ಶನಕ್ಕೆ ಆಗಮಿಸಿದ್ದು ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಕಾರಿನಿಂದ ಹೊರ ಬರುತ್ತಿದ್ದಂತೆ ನಾಲ್ಕು ಮಂದಿಯ ತಂಡ ಇವರಿಗೆ ಹಲ್ಲೆ ನಡೆಸಿದೆ.