ಮಂಜೇಶ್ವರ: ಬಾಕುಡ ಸಮಾಜ ಕೇಂದ್ರ ಸಮಿತಿಯ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ., ಪ್ಲಸ್-ಟು ಹಾಗೂ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಬಾಕುಡ ಸಮುದಾಯದ ನಾಗಬ್ರಹ್ಮ ಹದಿನೆಂಟು ದೈವಸ್ಥಾನಗಳ ಸಮಿತಿಯ ಅಧ್ಯಕ್ಷ ಶಂಕರ ಅಡ್ಕ ಉದ್ಘಾಟಿಸಿದರು. ಸಮುದಾಯದ ಅಭಿವೃದ್ದಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ನಮ್ಮ ಸಂಸ್ಕøತಿಯತ್ತ ಒಲವು ತೋರಿಸಬೇಕಾದ ಅನಿವಾರ್ಯತೆ ಇದೆ. ಆದುದರಿಂದ ಹಿರಿಯರು ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಗುರಿ ತಲುಪಲು ಬೆಂಬಲಿಗರಾಗಿ ಉತ್ತಮ ಮಟ್ಟಕ್ಕೆ ತಲುಪಲು ದಾರಿ ದೀಪವಾಗಿ ಇರಬೇಕು ಎಂದು ಹೇಳಿದರು.
ಬಾಕುಡ ಸಮಾಜ ಕೇಂದ್ರ ಸಮಿತಿಯು ಇಂತಹ ಸಮಾಜಮುಖಿ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಇನ್ನಷ್ಟು ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷೆ ಸುಜಾತ ಎಸ್. ಮಂಜೇಶ್ವರ ವಹಿಸಿದ್ದರು. ವಿದ್ಯಾರ್ಥಿಗಳನ್ನು ಸಮಾಜದ ಪ್ರಮುಖ ವಾಹಿನಿಗೆ ಕರೆ ತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ತಾವು ಮಾಡುತಿದ್ದೇವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದು ಬದುಕಿಗೊಂದು ಲಕ್ಷ್ಯದೊಂದಿಗೆ ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಂದಾಳು ವಿಜಯಕುಮಾರ್ ಆಂಬಲ ಮೊಗಾರು, ಬಾಕುಡ ಸಮಾಜ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ, ಪ್ರವೀಣ್ ಕೊಡೆಂಚೀರ್, ಹಿರಿಯರಾದ ಭಾಸ್ಕರ ಪಚ್ಲಂಪಾರೆ, ಪ್ರವೀಣ್ ಮಂಜೇಶ್ವರ, ಬಾಕುಡ ಸಮಾಜ ಸಮಾಜ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಶಿವಾನಂದ ಮಂಗಲ್ಪಾಡಿ, ಬಾಕುಡ ಸಮಾಜ ಕೇಂದ್ರ ಸಮಿತಿಯ ಕೋಶಾಧಿಕಾರಿ ಮಂಜುನಾಥ ಕಾರ್ಲೆ, ಬಾಕುಡ ಸಮಾಜ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಂಗಲ ಪೊಸೋಟು ಉಪಸ್ಥಿತರಿದ್ದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಸ್ವಾಗತಿಸಿ, ಜಯಪ್ರಕಾಶ್ ಮಂಜೇಶ್ವರ ವಂದಿಸಿದರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.