ಮುಳ್ಳೇರಿಯ: ಬಿರುಸಿನ ಮಳೆಗೆ ಕಾರಡ್ಕ ಮೂರನೇ ವಾರ್ಡಿನ ಪುಂಡಿಕಾಯಿ ಬಯಲಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದುಬಿದ್ದು, ಹಲವು ಎಕರೆ ಪ್ರದೇಶ ತೋಟ ಹಾನಿಗೀಡಾಗಿದೆ. ಪುಂಡಿಕಾಯಿ ಬಯಲಿನ ಗೋಪಾಲ ಮಣಿಯಾಣಿ ಎಂಬವರ ಮನೆ ಸನಿಹದ ಗುಡ್ಡ ಕುಸಿದು ನೀರು ಹರಿಯುವ ತೋಡು ಮಣ್ಣಿನಿಂದ ತುಂಬಿಕೊಂಡಿದೆ. ಮಳೆನೀರು ಸಂಪೂರ್ಣ ಕೃಷಿ ಭೂಮಿಯಲ್ಲಿ ಹರಿಯುತ್ತಿದ್ದು, ರಬ್ಬರ್, ಅಡಕೆ, ತೆಂಗಿನ ಕೃಷಿಗೆ ಹಾನಿಯುಂಟಾಗಿದೆ.
ಪುತ್ತಿಗೆ ಅಂಗಡಿಮೊಗರು ಶಾಲೆ ಸನಿಹ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ತಕ್ಷಣ ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಲಾಗಿದ್ದರೂ, ಮಳೆ ಬಿರುಸುಗೊಂಡಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಕುಂಬಳೆ ಕೊಯಿಪ್ಪಾಡಿ ರಸ್ತೆಯ ರೈಲ್ವೆ ಅಂಡರ್ಪ್ಯಾಸೇಜ್ನಲ್ಲಿ ನೀರುತುಂಬಿಕೊಂಡು ಕೊಯಿಪ್ಪಾಡಿ ಭಾಗಕ್ಕೆ ವಾಹನ ಸಂಚಾರ ಸ್ತಗಿತಗೊಂಡಿತ್ತು. ಇದರಿಂದ ಶಾಲಾ ವಾಹನಗಳಿಗೂ ತೆರಳಲಾಗದೆ, ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ಸಾಧ್ಯವಾಗಿರಲಿಲ್ಲ.