ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಕಾಸರಗೊಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ತೆಕ್ಕಿಲ್ ಪ್ರದೇಶದಲ್ಲಿ ವ್ಯಾಪಕ ಭೂಕುಸಿತವುಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಚೆರ್ಕಳದಿಂದ ಮೇಲ್ಪರಂಬ ವರೆಗಿನ ಕಡಿದಾದ ತಿರುವು ಹೊಂದಿರುವ ರಸ್ತೆಯನ್ನು ಗುಡ್ಡ ಬಗೆದು, ರಸ್ತೆ ನೇರಗೊಳಿಸುವ ಮೂಲಕ ಷಟ್ಪಥ ಕಾಮಗಾರಿ ನಡೆಸಲಾಗುತ್ತಿದ್ದು, ಮಳೆಯಿಂದಾಗಿ ಈ ಪ್ರದೇಶದಲ್ಲಿ ಕಾಮಗಾರಿ ಅಯೋಮಯಗೊಂಡಿದೆ. ಇನ್ನು ಕಾಸರಗೋಡಿನಿಂದ ಉಪ್ಪಳ ಪ್ರದೇಶ ಹೆದ್ದಾರಿ ಷಟ್ಪಥ ಕಾಮಗಾರಿಗೆ ಬಿರುಸಿನ ಮಳೆ ಭಾರಿ ಸಂಚಕಾರ ತಂದೊಡ್ಡಿದೆ. ಕೆಲವೆಡೆ ಸರ್ವೀಸ್ ರಸ್ತೆ ಸಂಪೂರ್ಣ ಹಾನಿಗೀಡಾಗಿದೆ.
ಕಾಸರಗೋಡು ಹೊರತುಪಡಿಸಿ ಕೇರಳದಲ್ಲಿ ಆರು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಗುರುವಾರ ರಜೆ ಘೊಷಿಸಲಾಗಿತ್ತು. ಇನ್ನೂ ಮೂರು ದಿನ ಬಿರುಸಿನ ಮಳೆಯಾಗುವ ಸಾಧ್ಯೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಧೂರು ಗ್ರಾಮದ ವಿವಿಧ ಪ್ರದೇಶಗಳಲ್ಲಿ ನೆರೆಹಾವಳಿ ಹಿನ್ನೆಲೆಯಲ್ಲಿ ಈ ಪ್ರದೆಸದ 25ರಷ್ಟು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು. ಇಬ್ಬರು ಇತರ ರಾಜ್ಯ ಕಾರ್ಮಿಕರನ್ನು ಸುನಾಮಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪೆರಿಯ ಸನಿಹದ ಕುವರ ಪ್ರದೇಶದಲ್ಲಿ ವ್ಯಾಪಕ ಭೂಕುಸಿತವುಂಟಾಗಿದೆ. ಈ ಪ್ರದೇಶದ ರಮಣಿ ಎಂಬವರ ಕೃಷಿಭೂಮಿಗೆ ಮಣ್ಣುಮಿಶ್ರಿತ ಮಳೆನೀರು ಹರಿದು ಅಡಕೆ, ತೆಂಗಿನ ಸಸಿಗಳು ಕೊಚ್ಚಿಕೊಂಡು ಹೋಗಿದೆ. ಚೋಯಿಚ್ಚಿ ಎಂಬವರ ತೆರೆದ ಬಾವಿ ಹಾಗೂ ಲೀಲಾಮಣಿ ಎಂಬವರ ಕೆರೆ ಕುಸಿದು ಹಾನಿಗೀಈಡಾಗಿದೆ.
ಚಿತ್ರ: ಪೆರಿಯ ಸನಿಹದ ಕುವರ ಪ್ರದೇಶದಲ್ಲಿ ರಮಣಿ ಎಂಬವರ ಕೃಷಿಭೂಮಿಗೆ ಭೂಕುಸಿತದಿಂದ ಮಣ್ಣುಮಿಶ್ರಿತ ಮಳೆನೀರು ಹರಿದು ಅಡಕೆ, ತೆಂಗಿನ ಸಸಿಗಳು ಕೊಚ್ಚಿಕೊಂಡು ಹೋಗಿದೆ.
ಉಪ್ಪಳದಲ್ಲಿ ವ್ಯಾಪಕ ಸಮುದ್ರಕೊರೆತದಿಂದ ಮನೆ, ಮಂದಿರಗಳಿಗೆ ಹಾನಿಯುಂಟಾಗಿದೆ.