HEALTH TIPS

ಕಾನೂನಿನಂತೆ ಪ್ರಕರಣದ ಡೈರಿ ನಿರ್ವಹಿಸದ ಪೊಲೀಸರು: ಹೈಕೋರ್ಟ್ ಗರಂ

        ಮುಂಬೈ: 'ಯಾವುದೇ ಪ್ರಕರಣದ ತನಿಖೆ ನಡೆಸುವ ಪೊಲೀಸರು, ಅದರ ಡೈರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಕುರಿತು ಕಾನೂನು ಇದ್ದರೂ, ನ್ಯಾಯಾಲಯ ಪದೇ ಪದೇ ಹೇಳುತ್ತಿದ್ದರೂ ಅದನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ' ಎಂದು ಬಾಂಬೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

          ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಹಾಗೂ ನೀಲಾ ಗೋಖಲೆ ಅವರು ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, 'ತನಿಖಾಧಿಕಾರಿಯು ಪ್ರಕರಣದ ತನಿಖೆಯ ಹಂತದಲ್ಲಿನ ಪ್ರತಿ ದಿನದ ಡೈರಿಯನ್ನು ನಿರ್ವಹಿಸಬೇಕು ಎಂದು ಸಿಆರ್‌ಪಿಸಿ 172(1-ಬಿ) ಸೆಕ್ಷನ್‌ನಲ್ಲಿ ಹೇಳಲಾಗಿದೆ' ಎಂದು ಇಲಾಖೆಯ ಗಮನಕ್ಕೆ ತಂದರು.

          ಮತ್ತೊಂದು ಪ್ರಕರಣದಲ್ಲಿ ಹಿಂದೆ ಇದೇ ರೀತಿಯ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತ್ತು. ಆಗ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾ ಪೊಲೀಸ್ ಠಾಣೆಗೂ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಮೂಲಕ, ಕಾನೂನಿನನ್ವಯ ಪ್ರಕರಣದ ಡೈರಿ ನಿರ್ವಹಿಸುವಂತೆ ಸೂಚಿಸಿದ್ದರು.

            ನ್ಯಾಯಾಲಯದ ಮುಂದೆ ತನಿಖಾಧಿಕಾರಿ ಹಾಜರುಪಡಿಸಿದ ಡೈರಿಯು ಯಾವುದೇ ಪ್ರಮುಖ ಮಾಹಿತಿಯನ್ನು ಒಳಗೊಳ್ಳದ ಮತ್ತು ಅತ್ಯಂತ ಅವ್ಯವಸ್ಥೆಯ ರೀತಿಯಲ್ಲಿ ನಿರ್ವಹಿಸಿದ್ದನ್ನು ಕಂಡು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಬಹುಷಃ ಪೊಲೀಸ್ ಮಹಾನಿರ್ದೇಶಕರ ಆದೇಶವು ಪೊಲೀಸ್‌ ಇಲಾಖೆಯ ಕೆಳ ಹಂತದ ಅಧಿಕಾರಿಗಳನ್ನು ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

            'ಇವೆಲ್ಲವನ್ನೂ ಗಮನಿಸಿದರೆ ಒಂದೋ ಅಧಿಕಾರಿಗಳು ಸುತ್ತೋಲೆ ಕುರಿತು ನಿರ್ಲಕ್ಷ್ಯ್ಯ ವಹಿಸಿದ್ದಾರೆ ಅಥವಾ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ ಎಂದರ್ಥ. ಪೊಲೀಸರಿಗೆ ಕಾನೂನಿನ ಅರಿವಿಲ್ಲ ಎನ್ನುವುದನ್ನು ನಂಬಲಾಗದು. ಡಿಜಿಪಿ ಸುತ್ತೋಲೆಯ ಮಾಹಿತಿ ಇಲ್ಲ ಎಂಬುದನ್ನೂ ನಂಬುವುದೂ ಅಸಾಧ್ಯ. ತೀವ್ರ ಅಸಮಾಧಾನದೊಂದಿಗೆ ಇದನ್ನು ಹೇಳಬೇಕಾದ ಪರಿಸ್ಥಿತಿ ನ್ಯಾಯಾಪೀಠದ್ದಾಗಿದೆ' ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

           ಖೇರ್ವಾಡಿ ಪೊಲೀಸ್ ಠಾಣೆಯ ತನಿಖಾಧಿಕಾರಿಯ ಪ್ರಕರಣದ ಡೈರಿಯನ್ನು ಡಿಜಿಪಿಗೆ ಕಳುಹಿಸುವಂತೆ ಹಾಗೂ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಪೀಠ ನಿರ್ದೇಶಿಸಿತು. ಇಲಾಖೆ ಹೊರಡಿಸಿರುವ ಸುತ್ತೋಲೆಯ ಜಾರಿ ಕುರಿತು ಪರಿಶೀಲನೆ ನಡೆಸಿ, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಎಲ್ಲದರ ಕುರಿತು ಜೂನ್ 28ರೊಳಗೆ ವಿವರವಾದ ವರದಿಯೊಂದನ್ನು ಸಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries