ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳ ಗಡಿಗಳನ್ನು ಮರು ವ್ಯಾಖ್ಯಾನಿಸಲು ಐದು ಸದಸ್ಯರ ಡಿಲಿಮಿಟೇಶನ್ ಆಯೋಗವನ್ನು ರಚಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಚುನಾವಣಾ ಆಯುಕ್ತ ಎ.ಶಹಜಹಾನ್ ಆಯೋಗದ ಅಧ್ಯಕ್ಷರಾಗಿದ್ದಾರೆ. ಐಟಿ ಪರಿಸರ ಕಾರ್ಯದರ್ಶಿ ರತನ್ ಕೇಳ್ಕರ್, ಲೋಕೋಪಯೋಗಿ ಕಾರ್ಯದರ್ಶಿ ಬಿಜು, ಮಾಹಿತಿ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಕೆ. ಹರಿಕಿಶೋರ್, ಕಾರ್ಮಿಕ ಮತ್ತು ಕೌಶಲ್ಯ ಮತ್ತು ಸಾರಿಗೆ ಕಾರ್ಯದರ್ಶಿ ಎಸ್.ಕೆ. ವಾಸುಕಿ ನಾಲ್ವರು ಸದಸ್ಯರು.
2025ರಲ್ಲಿ ಕೇರಳದಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸರ್ಕಾರದ ಚುನಾವಣೆಗೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಲಿಮಿಟೇಶನ್ ಆಯೋಗವು ಪಂಚಾಯತ್ ಮತ್ತು ನಗರಸಭೆಗಳ ಗಡಿಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದೆ. ರಾಜ್ಯದಲ್ಲಿರುವ ಪಂಚಾಯತ್ ಮತ್ತು ನಗರಸಭೆಗಳ ಗಡಿಗಳನ್ನು ಗುರುತಿಸಲು ಡಿಲಿಮಿಟೇಶನ್ ಆಯೋಗಕ್ಕೆ ಅಧಿಕಾರ ನೀಡಲಾಗಿದೆ. ಕೇರಳ ಪಂಚಾಯತ್ ರಾಜ್ ಕಾಯಿದೆ, 1994 ರ ಸೆಕ್ಷನ್ 10 ರ ಪ್ರಕಾರ, ಈ ಉದ್ದೇಶಕ್ಕಾಗಿ ಸರ್ಕಾರವು ವಿಶೇಷ ಆಯೋಗವನ್ನು ರಚಿಸಬೇಕು. ಇದರ ಪ್ರಕಾರ ಜೂನ್ 14ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಿಲಿಮಿಟೇಶನ್ ಪೂರ್ಣಗೊಂಡ ನಂತರ, ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ಉಳಿದ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ.
ಕೇರಳ ವಿಧಾನಸಭೆಯು ಕೇರಳ ನಗರಸಭೆ (ಎರಡನೇ ತಿದ್ದುಪಡಿ) ಮಸೂದೆ ಮತ್ತು ಕೇರಳ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಮಸೂದೆಯನ್ನು ಜೂನ್ 11 ರಂದು ಅಂಗೀಕರಿಸಿತ್ತು. .ಮಸೂದೆಗಳ ಅಂಗೀಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದವು ಮತ್ತು ಮಸೂದೆಗಳನ್ನು ಮಂಜೂರು ಮಾಡದಂತೆ ರಾಜ್ಯಪಾಲರನ್ನು ಸಂಪರ್ಕಿಸಿದ್ದವು.
ಇದೇ ವೇಳೆ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಜೂ.21ರವರೆಗೆ ಸೇರಿಸಬಹುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಜನವರಿ 1, 2024 ರಂದು 18 ವರ್ಷಗಳನ್ನು ಪೂರ್ಣಗೊಳಿಸುವ ವ್ಯಕ್ತಿಗಳು ಈ ದಿನಾಂಕದಂದು ನೋಂದಾಯಿಸಿಕೊಳ್ಳಬಹುದು. ಜುಲೈ 1 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.