ಕಣ್ಣೂರು: ಕಣ್ಣೂರು ಜಿಲ್ಲೆಯ ಉದಯಗಿರಿ ಪಂಚಾಯತ್ ವ್ಯಾಪ್ತಿಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ರೋಗ ಕಂಡುಬಂದ ಕೇಂದ್ರದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ತಕ್ಷಣವೇ ಕೊಲ್ಲುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಫಾರಂಗಳ ಹಂದಿಗಳನ್ನು ಕೊಂದು ಹೂಳಬೇಕೆಂದು ಆಜ್ಞೆ ನೀಡಲಾಗಿದೆ. ಮನ್ನತ್ತಿಕುಂಡ್ ಬಾಬು ಕೊಡಕನಾಳ್ ಮಾಲೀಕತ್ವದ ಹಂದಿ ಫಾರಂನಲ್ಲಿ ಆಫ್ರಿಕನ್ ಹಂದಿಜ್ವರ ದೃಢಪಟ್ಟಿದೆ.
ನಿಯಮಾನುಸಾರ ವಿಲೇವಾರಿ ಮಾಡುವಂತೆಯೂ ಸೂಚಿಸಲಾಗಿದೆ. ಉದಯಗಿರಿ ಪಂಚಾಯತ್ನಲ್ಲಿ ಹಂದಿ ಸಾಕಾಣಿಕೆ ಕೇಂದ್ರದ ಸುತ್ತ ಒಂದು ಕಿಲೋಮೀಟರ್ನಷ್ಟು ರೋಗ ದೃಢಪಟ್ಟ ಪ್ರದೇಶವನ್ನು ರೋಗ ಪೀಡಿತ ಪ್ರದೇಶವೆಂದು ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯವೆಂದು ಘೋಷಿಸಲಾಗಿದೆ.
ಈ ಪ್ರದೇಶಗಳಲ್ಲಿ ಹಂದಿ ಮಾಂಸ ವಿತರಣೆ, ಸರಬರಾಜು ಅಂಗಡಿಗಳ ಕಾರ್ಯಾಚರಣೆ, ಜಿಲ್ಲೆಯ ಇತರ ಪ್ರದೇಶಗಳಿಗೆ ಹಂದಿಗಳನ್ನು ಸಾಗಿಸುವುದು ಮತ್ತು ಇತರ ಪ್ರದೇಶಗಳಿಂದ ಕಣ್ಗಾವಲು ವಲಯಕ್ಕೆ ತರುವುದನ್ನು ಮೂರು ತಿಂಗಳ ಕಾಲ ನಿಷೇಧಿಸಲಾಗಿದೆ.
ಜಿಲ್ಲೆಗೆ ಅನ್ಯ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಅಕ್ರಮವಾಗಿ ಹಂದಿಗಳನ್ನು ಸಾಗಿಸುವ ಸಾಧ್ಯತೆಯಿರುವುದರಿಂದ ಪಶು ಸಂರಕ್ಷಣಾ ಇಲಾಖೆಯು ಪೋಲೀಸ್ ಮತ್ತು ಆರ್ಟಿಒ ಸಹಯೋಗದಲ್ಲಿ ಜಿಲ್ಲೆಯ ಚೆಕ್ ಪೋಸ್ಟ್ಗಳು ಮತ್ತು ಇತರ ಪ್ರವೇಶ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ. ರೋಗಮುಕ್ತ ವಲಯದ ಹಂದಿಗಳು ಮಾತ್ರ ಜಿಲ್ಲೆಗೆ ತರುವಂತೆ ನೋಡಿಕೊಳ್ಳಲಾಗುವುದು.