ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದ ಕೆಲವೆಡೆ ಹಿಂಸಾಚಾರ ಘಟನೆಗಳ ನಡುವೆಯೇ, ಬುಧವಾರ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಿತು.
ಬುಧವಾರ ರಾತ್ರಿ 7.30ರ ವೇಳೆಗೆ ಮಧ್ಯಪ್ರದೇಶದ ಅಮರವಾಡ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು ಶೇ 78.71ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳು, ಹಿಮಾಚಲ ಪ್ರದೇಶದ ಮೂರು, ಉತ್ತರಾಖಂಡದ ಎರಡು, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ ಮತ್ತು ಬಿಹಾರದ ತಲಾ ಒಂದು ಸೇರಿದಂತೆ ಒಟ್ಟಾರೆ 13 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು.
ಪಶ್ಚಿಮ ಬಂಗಾಳದ ಬಗದಾಹ್ ಮತ್ತು ರಣಘಾತ್ ದಕ್ಷಿಣ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ವರದಿಯಾಗಿವೆ. ಬಿಜೆಪಿ ಅಭ್ಯರ್ಥಿಗಳಾದ ಮನೋಜ್ ಕುಮಾರ್ ಬಿಸ್ವಾಸ್ (ರಣಘಾಟ್ ದಕ್ಷಿಣ) ಮತ್ತು ಬಿನಯ್ ಕುಮಾರ್ ಬಿಸ್ವಾಸ್ (ಬಗದಾಹ್) ಅವರು, ತಮಗೆ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಲು ಟಿಎಂಸಿ ಬಿಡಲಿಲ್ಲ ಎಂದು ದೂರಿದ್ದಾರೆ. ಆದರೆ, ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ.
ಉತ್ತರಾಖಂಡದ ಮಂಗಲೌರದಲ್ಲಿರುವ ಮತಗಟ್ಟೆ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಹಿಂಸಾಚಾರವನ್ನು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.