HEALTH TIPS

ಜುಲೈ 18 ರಂದು ಮತ್ತೆ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ 'ರತ್ನಭಂಡಾರ'

                 ಪುರಿ: ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಜಗನ್ನಾಥ ದೇಗುಲದ 'ರತ್ನ ಭಂಡಾರ'ದ ಒಳ ಕಪಾಟುಗಳನ್ನು ಜುಲೈ 18 ರಂದು (ಗುರುವಾರ) ಮತ್ತೆ ತೆರೆಯಲಾಗುವುದು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.

           ಇದು, ಎರಡನೇ ಹಂತದ ಪ್ರಕ್ರಿಯೆಯಾಗಿದ್ದು, ಕಪಾಟುಗಳಲ್ಲಿನ ಆಭರಣಗಳನ್ನು ದೇಗುಲದ ಆವರಣದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ.

               ಖಜಾನೆಯಲ್ಲಿರುವ ಆಭರಣಗಳ ಪರಿಶೀಲನೆ ಮತ್ತು ಖಜಾನೆ ವ್ಯವಸ್ಥೆಯ ದುರಸ್ತಿ ಕೈಗೊಳ್ಳುವ ಉದ್ದೇಶದಿಂದ ಜುಲೈ 14ರಂದು 'ರತ್ನ ಭಂಡಾರ'ವನ್ನು ತೆರೆಯಲಾಗಿತ್ತು. ಖಜಾನೆಯ ಒಳ ಮತ್ತು ಹೊರಗಿನ ಕಪಾಟುಗಳಲ್ಲಿ ಇರಿಸಿರುವ ಆಭರಣಗಳು ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ಮರದ ಪೆಟ್ಟಿಗೆಗಳಲ್ಲಿ ಇರಿಸಿ ತಾತ್ಕಾಲಿಕವಾಗಿ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲು ನಾಲ್ಕು ದಿನಗಳ ನಂತರ ಮತ್ತೆ ತೆರೆಯಲಾಗುವುದು ಎಂದು ಎಸ್‌ಜೆಟಿಎ ಹೇಳಿದೆ.

                  ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧೀ, ಸರ್ಕಾರ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಿಸ್ವಂತ್ ರತ್, ಪುರಿ ಜಿಲ್ಲಾಧಿಕಾರಿ ಶಂಕರ್ ಸ್ವೈನ್ ಮತ್ತಿತರ ಅಧಿಕಾರಿಗಳಿದ್ದ ಸಭೆ ಈ ನಿರ್ಧಾರ ಕೈಗೊಂಡಿದೆ.

          'ಜುಲೈ 18ರಂದು ಬೆಳಿಗ್ಗೆ 9.51ರಿಂದ 12.15ರ ಅವಧಿಯಲ್ಲಿ ನಾವು ಮತ್ತೆ ರತ್ನ ಭಂಡಾರ ತೆರೆಯಲಿದ್ದೇವೆ. ಒಳ ಕಪಾಟಿನಲ್ಲಿನ ಆಭರಣಗಳನ್ನು ಭದ್ರತಾ ಕೊಠಡಿಗೆ ಸ್ಥಳಾಂತರಿಸುತ್ತೇವೆ. ಇದೇ ಸಂದರ್ಭದಲ್ಲಿ ಎಎಸ್‌ಐ ಅಧಿಕಾರಿಗಳು ಇರಲಿದ್ದು, ರತ್ನಭಂಡಾರದ ದೃಢತೆಯನ್ನು ಪರಿಶೀಲಿಸುವರು' ಎಂದು ನ್ಯಾಯಮೂರ್ತಿ ರತ್ ಅವರು ಸಭೆಯ ನಂತರ ತಿಳಿಸಿದರು.

                ಭಂಡಾರವನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುವುದರಲ್ಲಿನ ತೊಡಕಿನ ಕಾರಣದಿಂದ, ಎಲ್ಲ ಮೌಲ್ಯಯುತ ವಸ್ತು, ಆಭರಣಗಳನ್ನು ಅದಕ್ಕಾಗಿಯೇ ಸಿದ್ಧಪಡಿಸಿರುವ ಮರದ ಪೆಟ್ಟಿಗೆಗಳಲ್ಲಿ ಇರಿಸಿ, ತಾತ್ಕಾಲಿಕ ಭದ್ರತಾ ಕೊಠಡಿಗೆ ಸಾಗಿಸಲಾಗುತ್ತದೆ ಎಂದೂ ವಿವರಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಅಗ್ನಿ ಅವಘಡದಿಂದ ರಕ್ಷಣೆ ಸೇರಿದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ವಹಿಸಲಾಗಿದೆ ಎಂದರು.

              ಜುಲೈ 18ರಂದು ಮತ್ತೆ ರತ್ನಾ ಭಂಡಾರವನ್ನು ತೆರೆಯುವಾಗ ದೇವಾಲಯ ಪ್ರವೇಶಕ್ಕೆ ವಿಧಿಸಲಾಗುವ ನಿರ್ಬಂಧಗಳನ್ನು ಭಕ್ತರು ಪಾಲಿಸುವಂತೆ ಎಸ್‌ಜೆಟಿಎ ಮನವಿ ಮಾಡಿದೆ.

ಮೂರು ಬೀಗಗಳನ್ನು ಕತ್ತರಿಸುವ ಮೂಲಕ ಜುಲೈ 14ರಂದು ಭಂಡಾರವನ್ನು ತೆರೆಯಲಾಗಿತ್ತು.

ರತ್ನ ಭಂಡಾರದ ಒಳಗೆ ಬಾಕ್ಸ್‌ಗಳು, ಅಲ್ಮೆರಾಗಳು ಕಂಡುಬಂದವು. ಜುಲೈ 15ರಂದು ಬಹುದಾ ಯಾತ್ರೆ, 17ರಂದು ಸುನಾ ಬೇಶಾ ಆಚರಣೆಗಳಿದ್ದ ಕಾರಣ, ಇವುಗಳಲ್ಲಿದ್ದ ಆಭರಣಗಳನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು ಎಂದು ತಿಳಿಸಿದರು.

             ಆಭರಣಗಳ ಸ್ಥಳಾಂತರದ ನಂತರ ಬಾಕ್ಸ್‌ , ಅಲ್ಮೆರಾಗಳನ್ನು ಒಳಗೊಂಡಂತೆ ಎಎಸ್‌ಐ ಅಧಿಕಾರಿಗಳು ಈ ಒಳ ಕಪಾಟುಗಳ ದೃಢತೆಯನ್ನು ಭೌತಿಕವಾಗಿ ಪರಿಶೀಲಿಸುವರು ಎಂದರು.

ರತ್ನ ಭಂಡಾರವನ್ನು ಮೂರು ಹಂತಗಳಲ್ಲಿ ತೆರೆಯಲಾಗುತ್ತದೆ. ಇದಕ್ಕೆ ಪೂರಕವಾಗಿ ಸಾಮಾನ್ಯ ನಿರ್ವಹಣಾ ಪ್ರಕ್ರಿಯೆಯನ್ನು ರೂಪಿಸಲಾಗಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್‌ ಹರಿಚಂದನ್‌ ಅವರು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries