ಬದಿಯಡ್ಕ: ಹಲಸಿನ ಕಾಯಿಗೆ ಇಂದು ವಿಶೇಷ ಸ್ಥಾನವಿದೆ. ಇದರ ಕಾಯಿ, ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು ಅತೀ ಬೇಡಿಕೆಯಿರುವ ಆಹಾರ ವಸ್ತುವಾಗಿದೆ. ಅನೇಕ ತರವಾಡು ಮನೆಗಳಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳಲ್ಲಿಯೂ ಹಲಸಿನ ಕಾಯಿ ಮತ್ತು ಹಣ್ಣನ್ನು ಉಪಯೋಗಿಸುವುದು ಕಂಡುಬರುತ್ತಿದೆ. ಮೊದಲು ದೇವರಿಗೆ ಸಮರ್ಪಣೆಯನ್ನು ಮಾಡಿದ ಮೇಲೆಯೇ ದೋಸೆ, ಅಪ್ಪವನ್ನು ಕುಟುಂಬದವರು ಉಪಯೋಗಿಸುವ ಕ್ರಮ ಕಂಡು ಬಂದಿದೆ.
ಹಲಸಿನ ಹಣ್ಣಿನ ಅಪ್ಪಸೇವೆ :
ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ದೇವರಿಗೆ ಹಲಸಿನ ಹಣ್ಣಿನ ಅಪ್ಪಸೇವೆ ನಡೆದುಬರುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ನಡೆಯುವ ಈ ವಿಶೇಷ ಸೇವೆಯು ಈ ಬಾರಿ ಜು.7ರಂದು ಭಾನುವಾರ ನಡೆಯಲಿದೆ. ಈ ಸೇವೆಯು ಬೇರೆ ಯಾವ ದೇವಸ್ಥಾನದಲ್ಲಿಯೂ ಕಾಣಸಿಗದು. ತುಳುವಿನ ಕಾರಾ ತಿಂಗಳಿನ ಒಂದು ದಿನ ಹಲಸಿನ ಹಣ್ಣಿನಿಂದ ತಯಾರಿಸಿದ ಅಪ್ಪವನ್ನು ದೇವರಿಗೆ ಸಮರ್ಪಿಸಲಾಗುವುದು. ಅನೇಕ ವರ್ಷಗಳಿಂದ ಈ ಸೇವೆಯು ನಡೆದುಬರುತ್ತಿದೆ. ಶುದ್ಧವಾದ ದೇಶೀ ದನದ ತುಪ್ಪದಿಂದಲೇ ಅಪ್ಪವನ್ನು ತಯಾರಿಸಲಾಗುತ್ತದೆ.
1944ರಲ್ಲಿ ಪಡ್ರೆ ಗ್ರಾಮದ ಈ ಏತಡ್ಕ ಸದಾಶಿವ ದೇವಸ್ಥಾನದ ಆಸುಪಾಸಿನ ಜಾಗವನ್ನು ಏತಡ್ಕ ದಿ. ಸುಬ್ರಾಯ ಭಟ್ಟರು ಖರೀದಿಸಿದ್ದರು. ಆಗ ದೇವಸ್ಥಾನವು ಮುಳಿಹುಲ್ಲಿನಿಂದ ಕೂಡಿದ್ದಾಗಿತ್ತು. 1948ರಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದರು. ಅಂದಿನಿಂದ ಹಲಸಿನಹಣ್ಣಿನ ಅಪ್ಪಸೇವೆಯು ನಿರಂತರವಾಗಿ ನಡೆದುಬರುತ್ತಿದೆ. ಕಾರಾತಿಂಗಳು ಜನರು ತುಂಬಾ ಕಷ್ಟದಲ್ಲಿರುತ್ತಿದ್ದರು. ಬಡತನದ ಹಿನ್ನೆಲೆಯಲ್ಲಿ ಜನರು ಹಲಸಿನ ಉತ್ಪನ್ನಗಳನ್ನೇ ತಿಂದು ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ತಮ್ಮ ಹಸಿವನ್ನು ನೀಗಿಸಿದ ಹಲಸನ್ನು ದೇವರಿಗೆ ಸಮರ್ಪಿಸುವುದು ಒಂದು ವಾಡಿಕೆಯಾಗಿ ಮುಂದುವರಿಯಿತು. ಇಂದಿಗೂ ಆ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. 2008ರಲ್ಲಿ ಊರಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವವು ಜರಗಿತ್ತು.
ಜು.7ರಂದು ಅಪ್ಪಸೇವೆ :
ಜು.7ರಂದು ಬೆಳಗ್ಗೆ 9.30ಕ್ಕೆ ಜರಗಲಿರುವ ಹಲಸಿನಹಣ್ಣಿನ ಅಪ್ಪಸೇವೆಯ ಸಂದರ್ಭ ಶ್ರೀದೇವರಿಗೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ ಜರಗಲಿದೆ. ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಜು.6 (ಇಂದು) ನಿವೃತ್ತಿ ಹೋಮಗಳು ಜರಗಲಿದೆ. ಅಪರಾಹ್ಣ ಕ್ಷೇತ್ರತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಭಗವದ್ಭಕ್ತರನ್ನುದ್ದೇಶಿಸಿ ಮಾತನಾಡಲಿರುವರು.