ಕುಂಬಳೆ: ಕುಂಬಳೆ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಶಬರ ಶಂಕರ ಸೇವಾಸಮಿತಿಯ ಕುನ್ನಿಲ್ಪಾರೆಯಲ್ಲಿರುವ ತರವಾಡು ಕ್ಷೇತ್ರ ಮತ್ತು ತರವಾಡು ಮನೆ ಬೀಗ ಒಡೆದು ನಗದು, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕಳವುಗೈಯಲಾಗಿದೆ.
ತರವಾಡು ಮನೆಯೊಳಗಿದ್ದ ಚಿನ್ನದ ಹೂವು, ಸಣ್ಣ ಕತ್ತಿ, ತರವಾಡು ಕ್ಷೇತ್ರದಿಂದ ಶ್ರೀ ವಯನಾಟ್ ಕುಲವನ್ ದೈವದ ಬೆಳ್ಳಿ ಆಯುಧ, ಶ್ರೀ ವಷ್ಣುಮೂರ್ತಿ ದೈವದ ಬೆಳ್ಳಿಯ ಎರಡು ಆಯುಧ, ತೊಂಡಚ್ಚನ್ ದೈವದ ಆಯುಧ, ಹಿತ್ತಾಳೆ ಮೂರು ಪಾತ್ರೆಗಳು, ಚೆಂಬು, ಕಾಣಿಕೆ ಹುಂಡಿ, ಶ್ರೀ ವೆಂಕಟ್ರಮಣ ದೇವರ ಮುಡಿಪು ಕಳವಿಗೀಡಾದ ವಸ್ತುಗಳಲ್ಲಿ ಒಳಗೊಂಡಿದೆ.
ಕ್ಷೇತ್ರದಲ್ಲಿ ದೀಪ ಇರಿಸಲು ಆಗಮಿಸಿದವರಿಗೆ ತರವಾಡು ಕ್ಷೇತ್ರದ ಬೀಗ ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಕ್ಷೇತ್ರ ಸಮಿತಿ ಪದಾಧಿಕಾರಿಗಳು ಆಗಮಿಸಿ ತಪಾಸಣೆ ನಡೆಸಿದಾಗ ಕ್ಷೇತ್ರ ಹಾಗೂ ತರವಾಡು ಮನೆಯಿಂದ ನಗ, ನಗದು ಕಳವಿಗೀಡಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಕಾಣಿಕೆ ಹುಂಡಿಯಲ್ಲಿ ಸುಮಾರು 1ಸಾವಿರ ರೂ. ಹಾಗೂ ಮುಡಿಪು ಹುಂಡಿಯಲ್ಲಿ 15ಸಾವಿರ ರೂ. ಇತ್ತೆನ್ನಲಾಗಿದೆ. ಸೇವಾ ಸಮಿತಿ ಪದಾಧಿಕಾರಿಗಳ ದೂರಿನ ಮೇರೆಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಆಸುಪಾಸು ಇತ್ತೀಚಿನ ಒಂದೆರಡು ತಿಂಗಳಲ್ಲಿ ಹಲವಾರು ಕಳವು ಪ್ರಕರಣಗಳು ನಡೆದಿದ್ದು, ಆರೋಪಿಗಳ ಪತ್ತೆಕಾರ್ಯ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳವು ಪ್ರಕರಣ ಹೆಚ್ಚಾಗಲು ಕಾರಣವಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.