ಮುಳ್ಳೇರಿಯ: ಅಡೂರು ಪಂಜಿಕಲ್ಲು ಅನುದನಿತ ಶಾಲಾ ವರಾಂಡದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಂಡುಬಂದಿದ್ದ ನವಜಾತ ಶಿಶುವಿನ ತಾಯಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದೂರು ಪೊಲೀಸ್ ಠಾಣೆಯ ಶ್ವಾನದಳದ ಮೂಲಕ ನಡೆಸಿದ ಕಾರ್ಯಾಚರಣೆಯಲ್ಲಿ ಅವಿವಾಹಿತ ಬಾಣಂತಿಯನ್ನು ಪತ್ತೆಹಚ್ಚಲಾಗಿದೆ. ಆಸುಪಾಸಿನ ಮನೆಗಳಿಗೆ ಸಂಚರಿಸಿದ ಶ್ವಾನ ಕೊನೆಗೂ ಉಪೇಕ್ಷಿತ ನವಜಾತಶಿಶುವಿನ ತಾಯಿಯನ್ನು ಪತ್ತೆಹಚ್ಚಿದೆ.
ಮೂವತ್ತರ ಹರೆಯದ ಯುವತಿ ಸಂಪೂರ್ಣ ಅಸೌಖ್ಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಕೆಯನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮಧ್ಯಾಹ್ನ ಒಂದು ದಿನ ಪ್ರಾಯದ ಹಸುಗೂಸನ್ನು ಶಾಲಾ ವರಾಂಡದಲ್ಲಿ ಪತ್ತೆಯಾಗಿತ್ತು. ಮಗು ಅಳುತ್ತಿದ್ದ ಶಬ್ದ ಕೇಳಿ ಸಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವಜಾತ ಶಿಶು ಪತ್ತೆಯಾಗುತ್ತಿದ್ದಂತೆ ಇದು ವಯನಾಡಿನ ಅರಣ್ಯದಲ್ಲಿ ತಲೆಮರೆಸಿಕೊಂಡಿರುವ ಮಾವೋಯಿಸ್ಟ್ ಜಿಶಾಳ ಮಗುವಾಗಿರುವ ಸಾಧ್ಯತೆ ಬಗ್ಗೆ ಕರ್ನಾಟಕ ಪೊಲೀಸ್ ಇಂಟೆಲಿಜೆನ್ಸ್ ಕೇರಳ ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಿರುವ ಯುವತಿ, ಮಗು ತನ್ನದೆಂದು ಒಪ್ಪಿಕೊಂಡಿರುವುದರಿಂದ ಸಂಶಯಕ್ಕೆ ತೆರೆ ಬಿದ್ದಿದೆ.