ಮಂಜೇಶ್ವರ: ಪುರಾತನ ಹಾಗೂ ಇತಿಹಾಸ ಪ್ರಸಿದ್ಧ, ಮೀಂಜ ಪಂಚಾಯಿತಿಯ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳರು ಶ್ರೀದೇವರ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ದೋಚಲಾಗಿದೆ.
ಸುತ್ತುಗೋಪುರದ ಮಹಡಿಯೇರಿ, ಒಳಗೆ ಇಳಿದು ಕೃತ್ಯವೆಸಗಲಾಗಿದೆ. ಕಚೇರಿಯೊಳಗಿದ್ದ ಲಾಕರ್ ಒಡೆಯಲು ಯತ್ನಿಸಲಾಗಿದೆ. ಭಕ್ತದಿಗಳು ಹರಿಕೆ ರೂಪದಲ್ಲಿ ಸಲ್ಲಿಸಲಾಗಿದ್ದ ೧೦ ಪವನು ಚಿನ್ನಾಭರಣವನ್ನು ಸಣ್ಣಪೆಟ್ಟಿಗೆಯಲ್ಲಿ ಹಾಕಿ. ಲಾಕರ್ ಮೇಲ್ಭಾಗದಲ್ಲಿರಿಸಲಾಗಿದ್ದು, ಇದನ್ನು ಕಳ್ಳರು ಕಳವುಗೈದಿದ್ದಾರೆ. ಗರ್ಭಗುಡಿಯೊಳಗಿದ್ದ ಬೆಳ್ಳಿ ಆಭರಣವನ್ನೂ ದೋಚಲಗಿದೆ. ಶುಕ್ರವಾರ ರಾತ್ರಿ ಪೂಜೆ ನಡೆಸಿ, ಅರ್ಚಕರು ಹಾಗೂ ಇತರ ಸಿಬ್ಬಂದಿ ಬಾಗಿಲು ಮುಚ್ಚಿ ತೆರಳಿದ್ದು, ಶನಿವಾರ ಬೆಳಗ್ಗೆ ಆಗಮಿಸಿದಾಗ ಗರ್ಭಗುಡಿ ಬಾಗಿಲು ಒಡೆದ ಸ್ಥಿತಿಯಲ್ಲಿರುವುದು ಪತ್ತೆಂಯಾಗಿತ್ತು. ಶುಕ್ರವಾರ ರಾತ್ರಿ ಸುರಿಯುತ್ತಿದ್ದ ಬಿರುಸಿನ ಮಳೆ ಕಳ್ಳರ ಪಾಲಿಗೆ ಸಹಕಾರಿಯಾಗಿತ್ತು. ಕಳವಿನ ಬಗ್ಗೆ ಮಾಹಿತಿ ತಿಳಿಯುತ್ತಿದಂತೆ ಬರೀ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಬಂದು ಸೇರಿದ್ದರು.
ದೇವಸ್ಥಾನ ಸಮಿತಿ ಪದಾಧಿಕಾರಿಗಳು ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು. ಆಸುಪಾಸಿನ ಸಿಸಿ ಕ್ಯಾಮರಾ ತಪಾಸಣೆ ನಡೆಸಿರುವ ಪೊಲೀಸರಿಗೆ ತಡರಾತ್ರಿ ೧೧.೩೦ರ ವೇಳೆಗೆ ಕೈಗವಚ ಹಾಕಿದ ವ್ಯಕ್ತಿಯೊಬ್ಬ ಸುತ್ತಾಡುತ್ತಿರುವುದು ಕಂಡುಬಂದಿದ್ದು, ಈ ದೃಶ್ಯವನ್ನು ಪೊಲೀಸರು ಸಂಗ್ರಿಸಿ, ಇದರ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.