ಕುಂಬಳೆ: ತೆಂಕುತಿಟ್ಟು ಯಕ್ಷಗಾನದ ದಿಗ್ಗಜ ಕುಂಬ್ಳೆ ಶ್ರೀಧರ ರಾವ್ ಅವರಿಗೆ ನುಡಿನಮನ ಕಾರ್ಯಕ್ರಮ ಹುಟ್ಟೂರು ಕುಂಬಳೆಯಲ್ಲಿ ಜರುಗಿತು. ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘ ಶೇಡಿಕಾವು ನೇತೃತ್ವದಲ್ಲಿ ಕುಂಬ್ಳೆ ಶೇಡಿಕಾವಿನ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಭೆ ಸಹಿತ ತಾಳಮದ್ದಳೆ ಕಾರ್ಯಕ್ರಮವನ್ನು ವೇದ ಮೂರ್ತಿ ಹರಿನಾರಾಯಣ ಅಡಿಗ ಕುಂಬ್ಳೆ ಹಾಗೂ ನಾರಾಯಣ ಅಡಿಗ ಶೇಡಿಕಾವು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಪತ್ರಕರ್ತ ಎಂ.ಚಾ ಚಂಬಲ್ತಿಮಾರ್ ಸಂಸ್ಮರಣಾ ಭಾಷಣ ಮಾಡಿ, ಕುಂಬಳೆ ಶ್ರೀಧರ ರಾವ್ ಅವರು ಸುದೀರ್ಘ 62ವರ್ಷಗಳ ಕಾಲ ಕಲಾಸೇವೆಮಾಡುವ ಮೂಲಕ ತೆಂಕುತಿಟ್ಟು ತವರಿನ, ಕುಂಬಳೆ ನೆಲದ ಚಾರಿತ್ರಿಕ ಕಲಾವಿದರಾಗಿ ಮೆರೆದಿದ್ದಾರೆ. ಅವರ ಸಮಗ್ರ ಕಲಾಯಾನದಲ್ಲಿ ಈ ನೆಲದ ಯಕ್ಷಗಾನದ ಕಲಾಚರಿತೆ ಅಡಕವಾಗಿದೆ. ಯಕ್ಷಗಾನದ ಇಂಥ ಕಲಾವಿದರ ಕೊಡುಗೆಯಿಂದ ನಡು ಹಾಗೂ ಕಲೆಗೆ ಮಾನ್ಯತೆ ಲಭಿಸಿದೆ. ನಾಡನ್ನು ಬೆಳಗಿಸಿದ ಮಹನೀಯ ಕಲಾವಿದರನ್ನು ನಾಡು ಆದರದಿಂದ ಸ್ಮರಿಸಿ ಗೌರವಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಬ್ರಹ್ಮವಾಹಕ, ವೇ.ಮೂ. ಹರಿನಾರಾಯಣ ಅಡಿಗ ಕುಂಬಳೆ, ಒಡನಾಡಿ ಅರ್ಥಧಾರಿ ಪಕಳಕುಂಜ ಶ್ಯಾಂಭಟ್, ಕಲಾವಿದ ದಿವಾಣ ಶಿವಶಂಕರ ಭಟ್, ಶ್ರೀಧರ ರಾಯರ ಸಹೋದರ, ಕಲಾವಿದ ಕುಂಬ್ಳೆ ಗೋಪಾಲ ಅವರು ಶ್ರೀಧರ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ "ಜಟಾಯುಮೋಕ್ಷ" ಯಕ್ಷಗಾನ ತಾಳಮದ್ದಳೆ ಜರುಗಿತು. ಮುಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀಶ ಬೇಂಗ್ರೋಡಿ, ವೆಂಕಟರಾಜ ಕುಂಟಿಕಾನ,ಶ್ರೀಹರಿ ಮಯ್ಯ ಮಧೂರು, ಪುಂಡಿಕಾಯಿ ರಾಜೇಂದ್ರ ಭಟ್,ಮುರಳೀಧರ ಶೇಡಿಕಾವು ಹಾಗೂ ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಂಭಟ್, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಅಶೋಕ ಕುಂಬಳೆ, ಪ್ರತಾಪ ಕುಂಬಳೆ, ಸದಾಶಿವ ಗಟ್ಟಿ ನಾಯ್ಕಾಪು ಸಹಕರಿಸಿದರು. ಎರಡನೇ ಆಖ್ಯಾನ "ವಾಲಿಮೋಕ್ಷ"ದ ಹಿಮ್ಮೇಳದಲ್ಲಿ ತಲ್ಪನಾಜೆ ಶಿವಶಂಕರ ಭಟ್-ಲಕ್ಷ್ಮೀಶ ಬೇಂಗ್ರೋಡಿ ಅವರ ದ್ವಂದ ಭಾಗವತಿಕೆ ಸಹಿತ ಸುರೇಶ ಆಚಾರ್ಯ ನೀರ್ಚಾಲು, ವಸಂತ ಭಟ್ ಭಾಗವತಿಕೆ ಮಾಡಿದರು. ಕೃಷ್ಣಮೂರ್ತಿ ಪಾಡಿ, ಪುಂಡಿಕೈ, ಹಾಗೂ ದಿವಾಣ ಶಿವಶಂಕರ ಭಟ್, ಗೋಪಾಲ ನಾಯ್ಕ್ ಸೂರಂಬೈಲು, ಮಜಲು ಉದಯ ಶಂಕರ ಭಟ್, ಶಿವರಾಮ ಭಂಡಾರಿ ಕಾರಿಂಜ, ಸದಾಶಿವ ಮುಳಿಯಡ್ಕ ಪಾಲ್ಗೊಂಡರು.
ಸಂಘದ ಸಂಚಾಲಕ ಅಶೋಕ ಕುಂಬಳೆ ಸ್ವಾಗತಿಸಿದರು. ಸುಜನಾ ಶಾಂತಿಪಳ್ಳ ವಂದಿಸಿದರು.