ಪೆರ್ಲ: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಸ್ಪೀಡ್ ಪವರ್ ಓಪನ್ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಪಿ.ಮಧುಶ್ರೀಮಿತ್ರ ಅವರು ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಹಿರಿಯ ಬಾಲಕಿಯರ ಪೂಮ್ಸಾ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಪ್ರಶಸ್ತಿ ಗಳಿಸಿದ್ದಾರೆ.
ಭಾರತದ ವಿವಿಧ ರಾಜ್ಯಗಳ ೬೦ಮಂದಿ ಸೇರಿದಂತೆ ವಿವಿಧ ದೇಶಗಳ ಸುಮಾರು ೧೫೦೦ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಫೈನಲ್ ಸ್ಪರ್ಧೆಯಲ್ಲಿ ಮಧುಶ್ರೀ ಅವರು ದಕ್ಷಿಣ ಕೊರಿಯಾದ ಸ್ಪರ್ಧಿಯನ್ನು ಮಣಿಸುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ.
ಮಧುಶ್ರೀ ಮಿತ್ರ ಪ್ರಸಕ್ತ ಬೆಂಗಳೂರಿನ ಟೆಕ್ಸಿಸ್ಟಮ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನೇಮಕಾತಿಯಾಗಿ ಕೆಲಸ ನಿರ್ವಹಿಸುತ್ತಿದಾರೆ. ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಅನಿಲ್ ಮಾಸ್ಟರ್ ಅವರಿಂದ ಟೇಕ್ವಾಂಡೋದಲ್ಲಿ ತರಬೇತಿ ಪಡೆದಿದ್ದಾರೆ. ಮಧುಶ್ರೀ ಅವರು ಬದಿಯಡ್ಕದ ಮಾಸ್ಟರ್ ಆನಂದ್ ಅವರ ಬಳಿ ತನ್ನ ೯ನೇ ವಯಸ್ಸಿನಿಂದ ಕರಾಟೆ ತರಬೇತಿ ಆರಂಭಿಸಿದ್ದು, ಎರಡನೇ ಪದವಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಇವರು ಪೆರ್ಲದ ಪರ್ತಜೆ ವೆಂಕಟರಾಜಮಿತ್ರ-ಸುಮಿತ್ರ ದಂಪತಿಯ ಪುತ್ರಿ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಹಳೇ ವಿದ್ಯಾರ್ಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಮಾನಸಮಿತ್ರ ಇವರ ಹಿರಿಯ ಸಹೋದರಿಯಾಗಿದ್ದಾರೆ. ಜುಲೈ ೧೯ರಿಂದ ೨೧ರ ವರೆಗೆ ಕೌಲಾಲಂಪುರದಲ್ಲಿ ಸ್ಪರ್ಧೆ ನಡೆದಿತ್ತು.