ಕಾಸರಗೋಡು: ವಿಶ್ವ ಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ ವಿಶ್ವದಲ್ಲಿಯೇ ಮೊದಲಬಾರಿಗೆ ಚತುರ್ವೇದ ಜ್ಞಾನ ಮಹಾಯಜ್ಞವು ೨೦೨೪ ನವೆಂಬರ ೧೭ ರಿಂದ ೨೬ ರವರೆಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ ಜರುಗಲಿದೆ. ಚತುರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ಜು. ೨೭ರಂದು ಬೆಳಗ್ಗೆ ೧೦.೩೦ಕ್ಕೆ ಕಾವುಗೋಳಿ ಶಿವ ದೇವಾಲಯ ವಠಾರದಲ್ಲಿ ನಕ್ಷತ್ರ ವನ ನಿರ್ಮಾಣಕ್ಕಾಗಿ ಸಸಿಗಳ ನೆಡುವಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಓ.ಕೆ ಜಯಚಮದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. ತ್ರಿಶ್ಯೂರ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಆಶೀರ್ವಚನ ನೀಡುವರು. ಟಿ. ಶ್ಯಾಮ್ ಭಟ್ ಬೆಂಗಳೂರು, ಐಎಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಮಹಾಯಜ್ಞದ ಸ್ವಾಗತ ಸಮಿತಿ ಕಚೇರಿಯನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಉದ್ಘಾಟಿಸುವರು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್ ನಕ್ಷತ್ರವನದ ಮಹತ್ವದ ಬಗ್ಗೆ ಮಾಹಿತಿ ನೀಡುವರು.
ನ. ೧೭ರಿಂದ ನಡೆಯಲಿರುವ ಚತುರ್ವೇದ ಜ್ಞಾನ ಮಹಾಯಜ್ಞವನ್ನು ತಮಿಳುನಾಡಿನ ಚಿದಂಬರಂ ಶ್ರೀ ನಟರಾಜ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಮಹಾದೇವ ದೀಕ್ಷಿತ್ ಅವರ ಮುಖ್ಯ ಪೌರೊಹಿತ್ಯದಲ್ಲಿ ನಾಲ್ಕು ಯಜ್ಞಶಾಲೆಗಳಲ್ಲಾಗಿ ೧೬ ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ನಡೆಸಲಾಗುವುದು. ಐದನೇ ಯಜ್ಞಶಾಲೆಯಲ್ಲಿ ವೇದ ಮಂತ್ರಗಳೊಂದಿಗೆ ಹೋಮಪೂಜಾದಿ ಕಾರ್ಯಗಳು ನೆರವೇರಲಿವೆ.
ಯಜ್ಞಕ್ಕೆ ಭಾರತದ ಹೆಸರಾಂತ ಸನ್ಯಾಸಿವರ್ಯರುಗಳು, ಮಂತ್ರ ತಂತ್ರ ವಿದ್ವಾಂಸರುಗಳು, ವಿವಿಧ ಕೇಂದ್ರ ಸಚಿವರುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ಚಿತ್ರರಂಗದಲ್ಲಿನ ಪ್ರಮುಖರು, ಆಧ್ಯಾತ್ಮಿಕ ವಿದ್ವಾಂಸರುಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರುಗಳು ಮೊದಲ್ಗೊಂಡು ವಿವಿಧ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮಹಾಯಜ್ಞ ಹಾಗೂ ಅನುಬಂಧ ಕಾರ್ಯಕ್ರಮಗಳಲ್ಲಿ ದಶಲಕ್ಷ ಮಂದಿ ಭಕ್ತರುಗಳು ಆಗಮಿಸಲಿದ್ದಾರೆ.
ಅಲ್ಲದೆ, ವಿಚಾರ ಗೋಷ್ಠಿ, ಸಂಕಿರಣ, ಉಪನ್ಯಾಸ, ಪ್ರಬಂಧ ಪ್ರಸ್ತುತಿ, ಕಲೋತ್ಸವ ಇತ್ಯಾದಿ ನಡೆಯಲಿದೆ. ಯಜ್ಞದ ಅಧ್ಯಯನ ಮತ್ತು ಸಂಶೋಧನೆಗಾಗಿ ದೇಶ ವಿದೇಶಿ ವಿಜ್ಞಾನಿಗಳು, ಪ್ರಪಂಚದಾದ್ಯಂತದ ವೈದಿಕ ಪಂಡಿತರು, ವಿವಿಧ ವಿಶ್ವವಿದ್ಯಾನಿಲಯದಿಂದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಟ್ರಸ್ಟ್ ಸದಸ್ಯ ಲಕ್ಷ್ಮೀ ನಾರಾಯಣ ಪಟ್ಟೇರಿ, ನಕ್ಷತ್ರ ವನ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಕೆ. ಮುರಳೀಧರನ್ ಹರಿಜಾಲ್, ಪ್ರಚಾರಸಮಿತಿ ಸಂಚಾಲಕ ಗಣೇಶ ಮಾವಿನಕಟ್ಟೆ, ಉಮೇಶ್ ಕಡಪ್ಪುರ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಶಿಧರ ಉಪಸ್ಥಿತರಿದ್ದರು.