ಕಾಸರಗೋಡು: ಬಂಟರ ಸಂಘ ಮಧೂರು ಸಮಿತಿ ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಮಧೂರು ಪರಕ್ಕಿಲದಲ್ಲಿರುವ ಸಂಘದ ಕಾರ್ಯಾಲಯದ ಸಭಾ ಭವನದಲ್ಲಿ ಜರಗಿತು.
ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ವಕೀಲ ಸದಾನಂದ ರೈ ಸಮಾರಂಭ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವರ ಅಧ್ಯಕ್ಷತೆ ವಹಿಸಿದ್ದರು. ಮಧೂರು ಮಹಿಳಾ ಬಂಟರ ಘಟಕದ ಅಧ್ಯಕ್ಷೆ ಪ್ರಸಿದ್ಧ ನಾಟಿ ವೈದ್ಯೆ ಯಮುನಾ ಎಸ್ ಶೆಟ್ಟಿ ದೀಪ ಬೆಳಗಿಸಿ, ವಿದ್ಯಾರ್ಥಿ ವೇತನ ವಿತರಿಸಿದರು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಮಾತನಾಡಿ, ಕಾಸರಗೋಡು ಜಿಲ್ಲೆಗೆ ಬಂಟರ ಭವನವೊಂದರ ನಿರ್ಮಾಣಕ್ಕೆ ಸಿದ್ಧತೆ ನಡೆಯುತಿದ್ದು ಇದು ಕಾಸರಗೋಡಿನ ಬಂಟ ಸಮುದಾಯದ ಬಹು ಕಾಲದ ಆಕಾಂಕ್ಷೆಯಾಗಿದ್ದು, ಇದಕ್ಕೆ ಸಮುದಾಯದ ಜನತೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಬಂಟರ ಸಂಘದ ಸಕ್ರಿಯ ಕಾರ್ಯಕರ್ತ, ಉದ್ಯಮಿ ರಮೇಶ್ ಶೆಟ್ಟಿ, ಶಿಕ್ಷಕಿ ರೋಹಿತಾಕ್ಷಿ ಬಿ ರೈ, ಗಣೇಶ್ ರೈ ನಾಯಕೋಡು ಮೊದಲಾದವರನ್ನು ಸನ್ಮಾನಿಸಲಾಯಿತು. ರೋಹಿತಾಕ್ಷಿ ಟೀಚರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ್ ರೈ ವಂದಿಸಿದರು.