ಕಾಸರಗೋಡು: ಹಸಿರು ಕೇರಳಂ ಮಿಷನ್ ನೇತೃತ್ವದಲ್ಲಿ ಜೀವನಂ ನೀಲೇಶ್ವರಂ ನೆರವಿನೊಂದಿಗೆ ರಾಜ್ಯ ಮಟ್ಟದಲ್ಲಿ ಒಂದು ಲಕ್ಷ ಕಾಂಡ್ಲಾ ಸಸಿಗಳನ್ನು ನೆಡುವ ನೂಲಕ ಕಾಂಡ್ಲಾ ಅರಣ್ಯ ನಿರ್ಮಾಣಕಾರ್ಯ ನಡೆಸಲಾಗುತ್ತಿದೆ.
ಜೀವನಂ ನೀಲೇಶ್ವರ ಸಂಘಟನೆಗೆ ಕಾಂಡ್ಲಾ ಸಸಿಗಳನ್ನು ಹಸ್ತಾಂತರಿಸುವ ರಾಜ್ಯ ಮಟ್ಟದ ವಿತರಣಾ ಸಮಾರಂಭವನ್ನು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಜೀವನಂ ನೀಲೇಶ್ವರ ಸಂಘಟನೆ ಅಧ್ಯಕ್ಷರ ದಿವಾಕರನ್ ಕಡಿಞÂಮೂಲೆ ಅವರನ್ನು ಜಿಲ್ಲಾಧಿಕಾರಿ ಶಾಲುಹೊದಿಸಿ ತೊಡಿಸಿ ಗೌರವಿಸಿದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಂಟಿ ಕಾರ್ಯಕ್ರಮ ಸಂಯೋಜಕ ಪಿ.ಎ.ಫೈಜಿ, ಸಾಮಾಜಿಕ ಅರಣ್ಯ ಇಲಾಖೆ ರೇಂಜ್ ಆಫೀಸರ್ ಎನ್.ವಿ.ಸತ್ಯನ್, ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಸುರ್ಜಿತ್ ಪಿ, ಜೀವವೈವಿಧ್ಯ ನಿರ್ವಹಣಾ ಸಮಿತಿ ಸಂಚಾಲಕಿ ಸುಶ್ಮಿತಾ ಹಾಗೂ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು ಉಪಸ್ಥಿತರಿದ್ದರು.
ಸಿಹಿ ನೀರು ಮತ್ತು ಉಪ್ಪು ನೀರಿನಲ್ಲಿ ಬೆಳೆಸಬಹುದಾದ ಕಾಂಡ್ಲಾ ಗಿಡಗಳು ಮಣ್ಣಿನ ಸವೆತ ತಡೆಗಟ್ಟುವುದರ ಜತೆಗೆ ಪ್ರಕೃತಿಯ ಸಂರಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ವಿವಿಧ ಮೀನು ಮತ್ತು ಜಲಚರಗಳಿಗೆ ಸುರಕ್ಷಿತ ತಾಣಗಳಾಗುತ್ತಿದೆ. ನೀರಿನೊಳಗೆ ಆಳದ ವರೆಗೂ ಮಣ್ಣಿನಡಿ ಬೇರು ಸಂಚರಿಸಿ ಮಣ್ಣಿನ ಸಂರಕ್ಷಣೆ ನಡೆಸುವುದರ ಜತೆಗೆ ನೀರಿನ ಶುದ್ಧೀಕರಣ ಹಾಗೂ ಇಂಗಾಲ ಶೇಖರಣಾ ಪ್ರದೇಶವಾಗಿಯೂ ಬೆಳೆಯುತ್ತವೆ. ಮುದ್ರ ನೀರಿನಿಂದ ಭೂಮಿಗೆ ಲವಣಾಂಶ ಹರಡುವುದನ್ನು ತಡೆಯಲು ಕರಾವಳಿಯ ಕಾಂಡ್ಲಾ ಅರಣ್ಯ ಸಹಾಯಕವಾಗುತ್ತಿದೆ. ಹಸಿರು ಪ್ರವಾಸೋದ್ಯಮದ ಭಾಗವಾಗಿ ಹಸಿರು ಕೇರಳ ಮಿಷನ್ನಿಂದ ಕಾಂಡ್ಲಾ ಪಾರ್ಕ್ಗಳನ್ನು ಉತ್ತೇಜಿಸಲಾಗುತ್ತಿದೆ.