ಮಂಜೇಶ್ವರ: ಮೌಲ್ಯಯುತ ಜೀವನದೊಂದಿಗೆ ಆದರ್ಶ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಗ್ರಂಥಾಲಯಗಳು ಸಹಕಾರಿಯಾಗಿದ್ದು ಉತ್ತಮ ನಾಗರಿಕರನ್ನಾಗಿ ಮಾಡುತ್ತದೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಕಿಶೋರ್ ಕುಮಾರ್ ಪಾವಳ ತಿಳಿಸಿದರು.
ಅವರು ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ಇದರ ನೇತೃತ್ವದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಪುಸ್ತಕಗಳ ಓದುವಿಕೆ ಉತ್ತಮ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಜಮೀಲ,ಕಮಲಾಕ್ಷಿ,ಚೈತ್ರ ಟೀಚರ್,ಗಣೇಶ್ ಕೊಡ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಸ್ ಎಸ್ ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ದೀಕ್ಷಿತ ದಿನೇಶ್ ಕೊಡ್ಲಮೊಗರು, ಹಫೀಝ್ ಗುವೇದಪಡ್ಪು, ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ತೇರ್ಗಡೆಯಾದ ವರ್ಷ ಗಣೇಶ್ ಕೊಡ್ಲಮೊಗರು, ಧನುಶ್ ಮಾಧವ ಪರಂದಳ, ಹಫ್ರಿನ ಭಾನು, ಹಝ್ರಿನ ಭಾನು, ಪದವಿಯಲ್ಲಿ ತೇರ್ಗಡೆಯಾದ ಅನುಶ್ರೀ ಗುವೇದಪಡ್ಪು ಹಾಗೂ ಬಿ.ಎಡ್. ನಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಗೊಂಡ ಚೈತ್ರ ಶೆಟ್ಟಿಯವರನ್ನು ಗ್ರಂಥಾಲಯ ವತಿಯಿಂದ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಾಚನಾ ಪಕ್ಷಾಚರಣೆಯ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಹೆಸರನ್ನು ಕುಮಾರಿ ರುಕ್ಷಾನ ಗುವೇದಪಡ್ಪು ವಾಚಿಸಿದರು.ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿ, ಗ್ರಂಥಪಾಲಕಿ ಜಯಶ್ರೀ ವಂದಿಸಿದರು.