ಮಂಜೇಶ್ವರ : ದೇಶೀಯ ಅಧ್ಯಾಪಕ ಪರಿಷತ್ (ಎನ್. ಟಿ.ಯು) ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಭಾನುವಾರ ಗುರುಪೂರ್ಣಿಮೆ ನಿಮಿತ್ತ ಸಹಸ್ರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಮನೆಯಲ್ಲಿ ವಿದ್ಯೆಯನ್ನು ಕಲಿಸುತ್ತಿರುವ, ಕೇರಳ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಪ್ರಬಂಧಕ ರಾಮಚಂದ್ರ ಚೆರುಗೋಳಿ ಅವರಿಗೆ ಗುರುವಂದನಾ ಕಾರ್ಯಕ್ರಮ ಅವರ ಸ್ವಗೃಹ ಚೆರುಗೋಳಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎನ್.ಟಿ.ಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ನಿವೃತ್ತ. ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಟೀಚರ್ ಹಾಗೂ ಎನ್.ಟಿ.ಯು ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಶುಭಹಾರೈಸಿದರು. ರಾಮಚಂದ್ರ ಚೆರುಗೋಳಿ ಇವರ ಶಿಷ್ಯರಾದ ಅಬ್ದುಲ್ ಲತೀಫ್ ಮಂಗಳೂರು, ಶಿವಪ್ರಸಾದ್ ಚೆರುಗೋಳಿ ಹಾಗೂ ಕುಮಾರಿ ಪ್ರೀತಿಕಾ ಗುರುಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ರಾಮಚಂದ್ರ ಚೆರುಗೋಳಿ ಇವರನ್ನು ಶಾಲು ಹೊದಿಸಿ,ಹಣ್ಣು ಹಂಪಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಿತ ವಿದ್ಯೆ ವ್ಯರ್ಥವಾಗಬಾರದು. ಅದು ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು ಎಂದು ಪ್ರೇರೇಣಾ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎನ್.ಟಿ. ಯು ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯ ಕೃಷ್ಣಮೂರ್ತಿ, ಮೀರಾವತಿ ಟೀಚರ್, ದಯಾನಂದ, ಜಯಂತಿ ಟೀಚರ್, ಸ್ವಪ್ನ ಟೀಚರ್ ಹಾಗೂ ಶ್ವೇತ ಟೀಚರ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎನ್ ಟಿ ಯು ಉಪಜಿಲ್ಲಾ ಕೋಶಾಧಿಕಾರಿ ರಘುವೀರ್ ರಾವ್ ವಂದಿಸಿದರು.