HEALTH TIPS

ಪ್ಯಾರಿಸ್‌ನ ವಿವಿಧೆಡೆ ರೈಲು ಸಂಪರ್ಕ ಜಾಲದ ಮೇಲೆ ಸಂಘಟಿತ ದಾಳಿ

 ಪ್ಯಾರಿಸ್‌: ಒಲಿಂ‍‍ಪಿಕ್‌ ಕೂಟದ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಪ್ಯಾರಿಸ್‌ನ ವಿವಿಧೆಡೆ ರೈಲು ಸಂಪರ್ಕ ಜಾಲದ ಮೇಲೆ ಸಂಘಟಿತ ದಾಳಿ ನಡೆದಿದ್ದು, ಫ್ರಾನ್ಸ್‌ನಾದ್ಯಂತ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಸಿಗ್ನಲ್‌ ಮೂಲಸೌಕರ್ಯ, ಕೇಬಲ್‌ಗಳು ಸೇರಿದಂತೆ ರೈಲ್ವೆಗೆ ಸೇರಿದ ಸ್ವತ್ತುಗಳಿಗೆ ಬೆಂಕಿ ಹಚ್ಚಲಾಗಿದೆ.

ಪ್ಯಾರಿಸ್‌ನ ಉತ್ತರ, ನೈರುತ್ಯ ಮತ್ತು ಪೂರ್ವ ಭಾಗಗಳಲ್ಲಿನ ಪ್ರಮುಖ ಜಂಕ್ಷನ್‌ಗಳನ್ನು ಗುರಿಯಾಗಿಸಿ ಗುರುವಾರ ರಾತ್ರಿ ಬೆಂಕಿ ಹಂಚಲಾಗಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಫ್ರಾನ್ಸ್‌ನಲ್ಲಿ ರೈಲ್ವೆ ಸಂಪರ್ಕವನ್ನು ನಿರ್ವಹಿಸುತ್ತಿರುವ ಎಸ್‌ಎನ್‌ಸಿಎಫ್‌ ತಿಳಿಸಿದೆ.

ರಾಜಧಾನಿಯ ಆಗ್ನೇಯ ಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ ಇಂತಹದೇ ದಾಳಿಯ ಪ್ರಯತ್ನ ನಡೆದಿದ್ದು, ರೈಲ್ವೆ ಸಿಬ್ಬಂದಿ ಅದನ್ನು ವಿಫಲಗೊಳಿಸಿದ್ದಾರೆ.

ಪ್ಯಾರಿಸ್‌ನಿಂದ ದೇಶದ ಇತರ ನಗರಗಳಿಗೆ ಹಾಗೂ ನೆರೆಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಹಲವಾರು ಹೈಸ್ಪೀಡ್‌ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಸಾರಿಗೆ ಸಚಿವ ಪ್ಯಾಟ್ರೀಸ್ ವೇಗ್ರಿಯೇಟ್ ಹೇಳಿದ್ದಾರೆ.

ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್‌ ಅವರು ಈ ದಾಳಿಯನ್ನು 'ಪೂರ್ವಯೋಜಿತ ಮತ್ತು ಸಂಘಟಿತವಾಗಿ ನಡೆದ ವಿಧ್ವಂಸಕ ಕೃತ್ಯ' ಎಂದು ಕರೆದಿದ್ದಾರೆ. 'ಈ ಕೃತ್ಯದ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಲು ನಮ್ಮ ಗುಪ್ತಚರ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ' ಎಂದು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ಯಾರಿಸ್‌- ಲಂಡನ್‌ ನಡುವಣ 'ಯೂರೊಸ್ಟಾರ್‌' ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರಿಂದ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಪ್ಯಾರಿಸ್‌ಗೆ ಪ್ರಯಾಣಿಸಲು ಬಯಸಿದ್ದ ಬ್ರಿಟನ್‌ನ ಹಲವು ಕ್ರೀಡಾಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ.

ಎಲ್ಲ ಮಾರ್ಗಗಳಲ್ಲಿ ರೈಲುಗಳ ಸಂಚಾರ ಯಥಾಸ್ಥಿತಿಗೆ ಬರಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಆದ್ದರಿಂದ ಈ ವಾರಾಂತ್ಯದವರೆಗೆ ಸುಮಾರು ಎಂಟು ಲಕ್ಷ ಪ್ರಯಾಣಿಕರು ತೊಂದರೆ ಅನುಭವಿಸಬಹುದು ಎಂದು ಮೂಲಗಳು ಹೇಳಿವೆ.

ಬ್ರಿಟನ್‌ ಪ್ರಧಾನಿಯ ಪ್ರಯಾಣ ಯೋಜನೆ ಬದಲು:

ಬ್ರಿಟನ್‌ ಪ್ರಧಾನಿ ಕಿಯರ್ ಸ್ಟಾರ್ಮರ್‌ ಅವರು ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು 'ಯೂರೊಸ್ಟಾರ್‌' ರೈಲಿನಲ್ಲಿ ಪ್ಯಾರಿಸ್‌ಗೆ ತೆರಳುವವರಿದ್ದರು. 'ಈ ಘಟನೆಯ ಕಾರಣ ಅವರ ಪ್ರಯಾಣ ಯೋಜನೆ ಬದಲಾಗಿದ್ದು, ವಿಮಾನದಲ್ಲಿ ಪ್ರಯಾಣಿಸುವರು' ಎಂದು ಅವರ ವಕ್ತಾರರು ಹೇಳಿದ್ದಾರೆ.


ದಾಳಿಯ ಹಿಂದೆ ಯಾರು?

ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. 'ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ' ಎಂದು ಪ್ರಧಾನಿ ಗೇಬ್ರಿಯಲ್ ಅಟ್ಟಲ್‌ ಹೇಳಿದ್ದಾರೆ. ದಾಳಿಯ ವಿಧಾನವನ್ನು ನೋಡಿದಾಗ ಎಡಪಂಥೀಯ ಭಯೋತ್ಪಾದಕರು ಅಥವಾ ಪರಿಸರ ಹೋರಾಟಗಾರರ ಮೇಲೆ ಅನುಮಾನ ಮೂಡುತ್ತದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ. ಆದರೆ ಅವರ ಮೇಲೆ ಅನುಮಾನಪಡಲು ಯಾವುದೇ ಪುರಾವೆಗಳು ಲಭಿಸಿಲ್ಲ ಎಂದು ಹೇಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries