ಕಾಸರಗೋಡು: ಸ್ಥಳ ನೀಡಿದ್ದ ಜಾಗದ ಮಾಲಿಕನ ಬೆದರಿಕೆ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇವರ ಸ್ಥಿತಿ ಗಂಭೀರವಾಗಿದೆ. ಬಂದಡ್ಕ ಪಡ್ಪು ನಿವಾಸಿ, ವೆಲ್ಡಿಂಗ್ ಕಾರ್ಮಿಕ ಜಯರಾಂ ಎಂಬವರ ಪತಿ ರೇಶ್ಮಾ(35)ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯರಾಂ ಅವರು ಬಂದಡ್ಕ ಏಣಿಯಡಿ ಎಂಬಲ್ಲಿ ವ್ಯಕ್ತಿಒಯೊಬ್ಬರಿಂದ 2020ರಲ್ಲಿ ಐದು ಸೆಂಟ್ ಜಾಗ ಖರೀದಿಸಿ, ಅದರಲ್ಲಿ ಕಟ್ಟಡ ನಿರ್ಮಿಸಿಕೊಮಡಿದ್ದರು. ಜಾಗ ನೀಡಿದ ವ್ಯಕ್ತಿ ಇತ್ತೀಚೆಗೆ ನಿಧನರಾಗಿದ್ದು, ಈ ಮಧ್ಯೆ ವಿದೇಶದಲ್ಲಿದ್ದ ಇವರ ಪುತ್ರ ಆಗಮಿಸಿ, ತಂದೆ ಮಾರಾಟ ಮಾಡಿರುವ ಅದೇ ಜಾಗಕ್ಕೆ ಮತ್ತಷ್ಟು ಮೊತ್ತ ನೀಡುವಂತೆ ಜಯರಾಂ ಅವರಲ್ಲಿ ಆಗ್ರಹಿಸಿದ್ದಾನೆ. ಒಮ್ಮೆ ಹಣ ನೀಡಿ, ದಾಖಲೆಪತ್ರ ತಯಾರಿಸಿಕೊಂಡಿರುವ ಜಯರಾಂ ಹೆಚ್ಚಿನ ಮೊತ್ತ ನೀಡಲು ನಿರಾಕರಿಸಿದಾಗ ಬೆದರಿಕೆಯೊಡ್ಡಿ ಹಣ ಪೀಕಿಸಲು ಯತ್ನಿಸಿದ್ದಾನೆ. ಅಲ್ಲದೆ ಸುಮಾರು 20ಮಂದಿಯನ್ನು ಕರೆತಂದು ಜಯರಾಮ ಹಾಗೂ ಅವರ ಕುಟುಂಬದ ಮೇಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಇವರ ಪತ್ನಿ ರೇಶ್ಮಾ, ಚೀಟಿಯೊಂದನ್ನು ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.